ಮೈಸೂರಿಗೆ ಕುದುರೆ ಜೂಜಿನ ಅಡ್ಡಾ ರವಾನೆ
ಬೆಂಗಳೂರು, ಜೂ. 19: ಬೆಂಗಳೂರು ಟರ್ಫ್ ಕ್ಲಬ್ ತನ್ನ ರೇಸಿಂಗ್ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದುವರೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಮೈಸೂರು ರೇಸ್ ಕೋರ್ಸ್ ಬಳಸಿಕೊಳ್ಳಲು ಸೂಚಿಸಿದೆ. ಬೆಂಗಳೂರಿನ ಹೊರವಲಯಕ್ಕೆ ಈಗಿನ ರೇಸ್ ಕೋರ್ಸ್ ಸ್ಥಳಾಂತರ ಆಗುವವರೆಗೂ ಈ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಯಿತು.
ಬೆಂಗಳೂರು ಟರ್ಫ್ ಕ್ಲಬ್ ನ ಅಧಿಕಾರಿಗಳು ಕೂಡ ಈ ಸಭೆ ಯಲ್ಲಿ ಭಾಗವಹಿಸಿದ್ದರೂ, ಡಿ.31, 2009ಕ್ಕೆ ರೇಸ್ ಕೋರ್ಸ್ ಬಂದ್ ಮಾಡುವಂತೆ ನೀಡಿದ ಆದೇಶದಲ್ಲಿ ಬದಲಾವಣೆ ಮಾಡಿಸಿಕೊಳ್ಳಲು ಆಗಲಿಲ್ಲ. ಬದಲಿಗೆ ಮೈಸೂರಿನ ರೇಸ್ ಕೋರ್ಸ್ ನಲ್ಲಿ ತಾತ್ಕಾಲಿಕವಾಗಿ ರೇಸ್ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿತು.
ಬೆಂಗಳೂರು ಟರ್ಫ್ ಕ್ಲಬ್ ಗೆ 430 ಎಕರೆ ಭೂಮಿಯನ್ನು ನೀಡಲಾಗಿದ್ದು, ಅದರ ಅವಧಿ ಡಿ, 31ಕ್ಕೆ ಮುಗಿಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೊಸ ಜಾಗವನ್ನು ಸೂಚಿಸಲಾಗಿದ್ದು, ಅಲ್ಲಿಗೆ ಬಿಟಿಸಿ ಸ್ಥಳಾಂತರಗೊಳ್ಳಲಿದೆ. ಆದರೆ, ಕುದುರೆ ಜೂಜು , ಬೆಟ್ಟಿಂಗ್ ಡಿ.31 ನಂತರ ನಡೆಸಲು ಅನುಮತಿ ನೀಡಲಾಗಿದೆ. ಬೆಂಗಳೂರು ಟರ್ಫ್ ಕ್ಲಬ್ ಗೆ ಸಂಪೂರ್ಣ ಸಹಕಾರ ನೀಡುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ಸೂಚಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications