ಬೆಂಗಳೂರಿಗರೆ ನಮ್ಮನ್ನೇಕೆ ಕೈಬಿಟ್ರಿ, ಎಚ್ಡಿಕೆ
ಬೆಂಗಳೂರು, ಜೂ. 17 : ಬೆಂಗಳೂರಿನಲ್ಲಿ ವಾಸಿಸುವವರು ಬುದ್ದಿವಂತರು ಮತ್ತು ಪ್ರಜ್ಞಾವಂತ ಮತದಾರರು ಅಂದುಕೊಂಡಿದ್ದೆ. ನನ್ನ ಆಡಳಿತದ ಅವಧಿಯಲ್ಲಿ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಅಭಿವೃದ್ದಿ ಕೆಲಸ ನಡೆದಿದೆ. ಆದರೂ ಬೆಂಗಳೂರಿಗರು ನಮ್ಮ ಪಕ್ಷವನ್ನು ನಿರ್ಲಕ್ಷಿಸಿದ್ದಾರೆ. ಮತ್ತೆ ನಾವು ಅಧಿಕಾರಕ್ಕೆ ಬಂದಾಗ ಈ ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೇ ಎಂದು ಆಲೋಚಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಮೂಲಭೂತ ಸೌಕರ್ಯ ಅಭಿವೃದ್ದಿಪಡಿಸುವ ಕೆಲಸ ನಡೆದಿದೆ. ಅತೀ ಹೆಚ್ಚಿನ ಫ್ಲೈಓವರ್, ಅಂಡರ್ ಪಾಸ್, ರಸ್ತೆ ಕಾಮಗಾರಿ ಕೆಲಸಗಳು ನಡೆದಿದೆ. ಪುಟ್ಟೇನಹಳ್ಳಿ ಕೆರೆ ಅಭಿವೃದ್ದಿಗೆ ವಿಶೇಷ ಕಾಳಜಿ ವಹಿಸಿದ್ದೆ. ಪುಟ್ಟೇನಹಳ್ಳಿ (ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ವ್ಯಾಪ್ತಿ) ಪ್ರದೇಶದಲ್ಲಿ ನನಗೆ ಬರೀ 25 ಮತಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಂದಿದೆ. ಅದೇ ಅಭಿವೃದ್ದಿ ಬಗ್ಗೆ ಏನೂ ಗಮನ ಕೊಡದ ಬಿಜೆಪಿಗೆ 600 ಮತಗಳು ಬಂದಿವೆ. ಬೆಂಗಳೂರು ಮಹಾನಗರದ ಅಭಿವೃದ್ದಿಗೆ ಶ್ರಮಿಸಿ ಏನು ಪ್ರಯೋಜನ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ಬಲ ಗ್ರಾಮೀಣ ಪ್ರದೇಶದಲ್ಲಿ ಎನ್ನುವುದನ್ನು ನಾವು ಅರಿತಿದ್ದೇವೆ. ನಾವು ರೈತಾಪಿ ವರ್ಗದವರನ್ನು ನಂಬಿದ ಪಕ್ಷ ಎಂದು ಹೇಳಿಕೆ ನೀಡಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಮತ್ತೆ ಬಲಪ್ರದರ್ಶನ ತೋರಿಸುತ್ತೇವೆ. ಅದರಲ್ಲೂ ಬೆಂಗಳೂರು ಮತದಾರರಿಗಿಂತ ಹೊರವಲಯದ ಜನರು ಜೆಡಿಎಸ್ ಕೈಬಿಡಲಾರರು ಎಂದು ಕುಮಾರಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications