ಜೈಟ್ಲಿ ಸಭೆ ಗೈರು ಹಾಜರಾದ ಈಶ್ವರಪ್ಪ
ಆದರೆ, ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನಕ್ಕೆ ಅರುಣ್ ಜೈಟ್ಲಿ ರಾಜ್ಯ ಆಗಮಿಸಬೇಕು ಎಂದು ಪಟ್ಟು ಹಿಡಿದು ಕುಂತಿದ್ದ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಹಿರಂಗ ಬಂಡಾಯ ಬಾವುಟ ಹಿಡಿದು ನಿಂತಿರುವ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಮಾತ್ರ ಸಭೆಗೆ ಗೈರು ಹಾಜರಾಗಿದ್ದಾರೆ. ಮೂಲಗಳ ಪ್ರಕಾರ ಈಶ್ವರಪ್ಪ ಅವರು ಮುಖ್ಯಮಂತ್ರಿ ಹಾಗೂ ಅಧ್ಯಕ್ಷರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ. ಅಸಮಾಧಾನಗೊಂಡಿರುವ ಕೆಲ ಶಾಸಕರೊಂದಿಗೆ ಈಶ್ವರಪ್ಪ ರಾತ್ರಿ ಹೊತ್ತಿಗೆ ಜೈಟ್ಲಿ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ, ಬೇಡಿಕೆಗಳು ಕುರಿತಂತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಬಳ್ಳಾರಿಯ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರು ಕೂಡಾ ಮುಖ್ಯಮಂತ್ರಿಗಳೊಂದಿಗೆ ಮುನಿಸಿಕೊಂಡಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ಅವರು ಬಹಿರಂಗವಾಗಿ ಸಿಎಂ ಕಾರ್ಯವೈಖರಿಗೆ ಟೀಕಿಸಿದ್ದರು. ಮುಖ್ಯಮಂತ್ರಿಗಳು ಶಾಸಕ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೆಲ ಸಚಿವರನ್ನು ಬಿಟ್ಟು ಯಾರಿಗೂ ಮುಖ್ಯಮಂತ್ರಿಗಳು ಕಿಮ್ಮತ್ತು ನೀಡುತ್ತಿಲ್ಲ ಎಂಬ ಆರೋಪ ರೆಡ್ಡಿ ಹಾಗೂ ಈಶ್ವರಪ್ಪ ಅವರದಾಗಿದೆ. ಅಲ್ಲದೇ, ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೆಲ ಸಚಿವರ ವಿರುದ್ಧ ಬಹಿರಂಗ ಟೀಕೆ ಮಾಡತೊಡಗಿದ್ದು, ಸರಕಾರದಲ್ಲಿರುವ ಅಸಮರ್ಥ ಸಚಿವರನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು.
ರೆಡ್ಡಿ ಸಹೋದರರು ತಿರುಪತಿಯಲ್ಲಿ ಇರುವುದರಿಂದ ಅವರೂ ಕೂಡಾ ಇಂದು ಜೈಟ್ಲಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಕಡಿಮೆ ಇದೆ. ನಾಳೆ ಕೂಡಾ ಜೇಟ್ಲಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆಯಿದೆ. ಜನಾರ್ದನರೆಡ್ಡಿ ನಾಳೆ ಅವರನ್ನು ಭೇಟಿ ಮಾಡಬಹುದು. ಈ ಮಧ್ಯ ಸಭೆಗೂ ಮುಂಚೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸದಾನಂದಗೌಡ, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದ್ದರೂ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)