ಸತ್ಯಂನಲ್ಲಿ ಉದ್ಯೋಗ ಕಡಿತ : ಕೇಂದ್ರದ ಕೆಂಗಣ್ಣು
ನವದೆಹಲಿ, ಜೂ 2 : ಕೋಟ್ಯಂತರ ರುಪಾಯಿ ಅವ್ಯವಹಾರಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿರುವ ಸಾಫ್ಟ್ ವೇರ್ ಕಂಪನಿ ಸತ್ಯಂನಲ್ಲಿ ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲು ಕೇಂದ್ರ ಸರಕಾರಕ್ಕೆ ಅಧಿಕಾರವಿದೆಯೇ? ಅಥವಾ ಹಸ್ತಕ್ಷೇಪ ಮಾಡುತ್ತಿರುವುದು ಸರಿಯೆ? ಎಂಬ ಜಿಜ್ಞಾಸೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸತ್ಯಂ ಕಂಪನಿಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳು ಕಂಪನಿಗೆ ಭಾರವಾಗಿದ್ದು ಅವರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸತ್ಯಂ ಕಂಪನಿಯ ಸಾಫ್ಟ್ ವೇರ್ ವಿಭಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟೆಕ್ ಮಹೀಂದ್ರ ಘೋಷಿಸಿರುವ ಹಿನ್ನೆಲೆಯಲ್ಲಿ ನೌಕರನ್ನು ಕಾಪಾಡಲು ಕೇಂದ್ರ ಸರಕಾರ ಮುಂದಾಗಿದೆ. ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖರ್ಷೀದ್ ಅವರು ನೌಕರರನ್ನು ತೆಗೆದುಹಾಕಲು ಬಿಡುವುದಿಲ್ಲ ಎಂದು ಹೇಳಿದ್ದರಿಂದ ಸರಕಾರದ ಹಸ್ತಕ್ಷೇಪದ ಪ್ರಶ್ನೆ ಉದ್ಭವಿಸಿದೆ.
ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಆಡಳಿತ ವಿಭಾಗದಲ್ಲಿನ ಸುಮಾರು 8 ಸಾವಿರದಿಂದ 10 ಸಾವಿರದವರೆಗೆ ನೌಕರರನ್ನು ಕೆಲಸದಿಂದ ಸತ್ಯಂ ತೆಗೆದುಹಾಕುತ್ತಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಖುರ್ಷೀದ್, ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕಣ್ಣುಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಸತ್ಯಂ ಕಂಪನಿಯ ಸ್ಥಾಪಕ ರಾಮಲಿಂಗ ರಾಜು ಕೋಟ್ಯಂತರ ರುಪಾಯಿ ಪಂಗನಾಮ ಹಾಕಿ ಸಾವಿರಾರು ನೌಕರರನ್ನು ಸಂಕಷ್ಟಕ್ಕೆ ದೂಡಿದಾಗ ಸರಕಾರ ಮಧ್ಯಸ್ಥಿಕೆ ವಹಿಸಿ ಕಂಪನಿಯನ್ನು ಮತ್ತು ನೌಕರರನ್ನು ಪಾರು ಮಾಡಲು ಮುಂದಾಗಿದ್ದು ಸರಿ. ಆದರೆ, ಕಂಪನಿಯ ನೌಕರರನ್ನು ಕಾಪಾಡಲು ಮತ್ತು ಅವರನ್ನು ಕೆಲಸದಿಂದ ತೆಗೆದುಹಾಕಲಾಗದಂತೆ ತಡೆಯಲು ಪ್ರಯತ್ನಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಸರಕಾರ ಹಸ್ತಕ್ಷೇಪ ಮಾಡಬಾರದು ಎಂದು ಐಟಿ ಪರಿಣತರು ಹೇಳುತ್ತಿದ್ದಾರೆ. ಉದ್ಯೋಗ ಕಡಿತ ಸಂಪೂರ್ಣ ಕಂಪನಿಯ ವಿವೇಚನೆಗೆ ಬಿಟ್ಟಿದ್ದು, ಅದು ಸರಕಾರದ ವ್ಯವಹಾರವೇ ಅಲ್ಲ ಎಂಬುದು ಮೊದಲನೆಯ ವಾದ. ಎರಡನೆಯದಾಗಿ, ಸಾಫ್ಟ್ ವೇರ್ ಇಂಜಿನಿಯರೇ ಇರಲಿ, ಮಾರ್ಕೆಟಿಂಗ್ ಕ್ಷೇತ್ರದಲ್ಲೇ ಇರಲಿ ನೌಕರರಿಗೆ ಬೇರೆ ಕಂಪನಿಗಳಲ್ಲಿ ನೌಕರಿ ಸಿಕ್ಕೇ ಸಿಗುತ್ತದೆ, ಸಂಬಳ ಕಡಿಮೆಯಿದ್ದರೂ ಸಹ. ಅಂಥವರನ್ನು ಕಾಪಾಡಲು ಮುಂದಾಗಿ ಗೊಂದಲಕ್ಕೆ ಸರಕಾರ ದೂಡಬಾರದು. ಮೂರನೆಯದಾಗಿ, ಸರಕಾರ ಕಂಪನಿಯಲ್ಲಿ ಬಂಡವಾಳ ಹೂಡಿಲ್ಲ.
ಆಡಳಿತ ಮಂಡಳಿಯಲ್ಲಿದ್ದ ಸರಕಾರದ ಪ್ರತಿನಿಧಿ ಕಂಪನಿಯನ್ನು ಸಂಕಷ್ಟದಿಂದ ಹೊರತರಲು ಪ್ರಯತ್ನಿಸಿದ್ದರೂ ನಂತರ ಕಂಪನಿಗೆ ಯಾವುದೇ ಪ್ರತಿಷ್ಠಿತ ಸರಕಾರಿ ಯೋಜನೆಗಳನ್ನು ನೀಡಿಲ್ಲ. ಟೆಕ್ ಮಹೇಂದ್ರ ವ್ಯವಹಾರದಲ್ಲೂ ಹಸ್ತಕ್ಷೇಪ ಮಾಡುವುದು ಸಲ್ಲ ಎಂಬುದು ಐಟಿ ಪರಿಣತ ಅಭಿಮತ. ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಕೆಲಬಾರಿ ಆಡಳಿತ ಮಂಡಳಿಯಲ್ಲಿನ ಸರಕಾರದ ಪ್ರತಿನಿಧಿ ನಿರ್ಧಾರ ತೆಗೆದುಕೊಳ್ಳುತ್ತಾರಾದರೂ ಅದು ವಿರಳ.
ಸತ್ಯಂ ಮಾತ್ರವಲ್ಲ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಅನೇಕ ಕಂಪನಿಗಳು ಖರ್ಚುವೆಚ್ಚಗಳನ್ನು ಸರಿದೂಗಿಸಲು ನೌಕರರನ್ನು ತೆಗೆದುಹಾಕುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಸಹಜ ಕೂಡ. ಆ ಕಂಪನಿಗಳ ವ್ಯವಹಾರದಲ್ಲಿ ಅಥವಾ ನೌಕರರನ್ನು ಕಾಪಾಡುವಲ್ಲಿ ಯಾವ ಸರಕಾರಗಳೂ ಹಸ್ತಕ್ಷೇಪ ಮಾಡಿಲ್ಲ. ಹೀಗಿದ್ದಾಗ, ಸತ್ಯಂ ಕಂಪನಿಯಲ್ಲಿ ಸರಕಾರವೇಕೆ ಕೈಯಾಡಿಸಬೇಕು?
(ಏಜೆನ್ಸೀಸ್)