ರಾಷ್ಟಪತಿ ಭವನ :ರಾಷ್ಟ್ರಪತಿಯನ್ನು ಮರೆತ ಸಂಸದರು
ನವದೆಹಲಿ, ಮೇ. 28 : ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಎರಡನೇ ಹಂತದ ಸಂಪುಟ ವಿಸ್ತರಣೆ ಗುರುವಾರ ಸಾಂಗವಾಗಿ ನಡೆಯಿತು. ಆದರೆ, ರಾಷ್ಟ್ರಪತಿ ಭವನದ ಅಶೋಕ್ ಹಾಲ್ ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಂಸದರು ಮೊದಲ ಬಾರಿಗೆ ಸಚಿವರಾಗುವ ಹುಮ್ಮಸ್ಸಿನಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರತಿಜ್ಞಾ ವಿಧಿ ಬೋಧಿಸುವುದಕ್ಕಿಂತ ಮೊದಲೇ ತಾವೇ ಪ್ರಮಾಣ ವಚನ ಓದಲಾರಂಭಿಸಿ ಗಂಭೀರವಾಗಿದ್ದ ಕಾರ್ಯಕ್ರಮವನ್ನು ಕೆಲನಿಮಿಷ ನೆಗೆಗಡಲಲ್ಲಿ ತೇಲಿಸಿದರು.
ಸಚಿವರಾದ ವಿ.ನಾರಾಯಣಸಮಿ ಹಾಗೂ ಸೌಗುತ್ ರಾಯ್ ಅವರುಗಳು ಪ್ರಮಾಣ ವಚನದ ವೇಳೆ ತಬ್ಬಿಬ್ಬಾದರು. ಇಬ್ಬರು ರಾಜ್ಯಖಾತೆ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಷ್ಟ್ರಪತಿ ಅವರು ಪ್ರಮಾಣ ವಚನ ಬೋಧಿಸುವ ಮುನ್ನ ತಾವಾಗಿಯೇ ಓದಲು ಆರಂಭಿಸಿದರು. ಅಷ್ಟರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ವೇಟ್... ವೇಟ್ ಎಂದು ನಗುತ್ತಾ ತಡೆದರು. ತಿಳಿಯದೆ ತಪ್ಪು ಮಾಡಿದ ಸಂಸದರು ಹೌಹಾರಿದಂತಾದರು. ತಪ್ಪಿನ ಅರಿವಾಗಿ 'ಸಾರಿ ಮೇಡಮ್' ಅನ್ನುತ್ತಾ, ಮರಳಿ ರಾಷ್ಟ್ರಪತಿಗಳು ಆರಂಭಿಸಿದ ಬಳಿಕ ಪುನರುಚ್ಚರಿಸಿದರು.
ಈ ಘಟನೆಯಿಂದ ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಅಶೋಕ್ ಹಾಲ್ ನಲ್ಲಿ ನೆರೆದಿದ್ದ ಅನೇಕ ಘಟಾನುಘಟಿ ಮುಖಂಡರ ಕ್ಷಣ ಕಾಲ ನಕ್ಕಿದ್ದು ಇಂದಿನ ವಿಶೇಷವಾಗಿತ್ತು.
(ಏಜನ್ಸೀಸ್)