ಕರ್ನಾಟಕ ಸಿಇಟಿ ಫಲಿತಾಂಶಗಳು ಪ್ರಕಟ
ಬೆಂಗಳೂರು, ಮೇ.25: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ 'ಸಿಇಟಿ 2009'ರ ಫಲಿತಾಂಶಗಳನ್ನು ಸೋಮವಾರ ಪಿಯು ಮಂಡಳಿಯ ಅಧ್ಯಕ್ಷ ಎಸ್ ಜಿ ಹೆಗಡೆ ಬಿಡುಗಡೆ ಮಾಡಿದರು. ಈ ಬಾರಿಯ ರ್ಯಾಂಕ್ ಗಳಿಕೆಯಲ್ಲಿ ಮಂಗಳೂರು ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ವೈದ್ಯಕೀಯ ಹಾಗೂ ಹೋಮಿಯೋಪತಿಯಲ್ಲಿ ಅನೀಶ್ ಭಟ್ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಅನೀಶ್ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿ. ಬೆಂಗಳೂರು ಎಂಇಎಸ್ ಕಾಲೇಜಿನ ಪಿ ಉಲ್ಲಾಸ್ ವೈದ್ಯಕೀಯದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದು ಬೆಂಗಳೂರು ವಿಜಯ ಸಂಯುಕ್ತ ಪಿಯು ಕಾಲೇಜಿನ ಕೆ ಎಲ್ ಪ್ರೀತೀಶ್ ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಎಂಜಿನಿಯರಿಂಗ್ ನಲ್ಲಿ ನವೀನ್ ಭಟ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ನವೀನ್ ಭಟ್ ಮಂಗಳೂರಿನ ಸತ್ಯಸಾಯಿ ಪಿಯು ಕಾಲೇಜಿನ ವಿದ್ಯಾರ್ಥಿ. ಎಂಜಿನಿಯರಿಂಗ್ ನ ದ್ವಿತೀಯ ರ್ಯಾಂಕ್ ಯಶವಂತ ಮಾರಾಠೆ ಪಾಲಾಗಿದ್ದು ತೃತೀಯ ರ್ಯಾಂಕ್ ಮೈಸೂರಿನ ವಿಜಯ ವಿಠಲ ಕಾಲೇಜಿನ ಎಂ ವಿಮಲ್ ಅವರ ಕೈವಶವಾಗಿದೆ.
ಈ ಬಾರಿ ಸಿಇಟಿಯನ್ನು 1.20 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಇಂದು ಮಧ್ಯಾಹ್ನ 12 ಗಂಟೆ ನಂತರ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 1 ಗಂಟೆಗೆ ರಾಜ್ಯದ ಎಲ್ಲ 227 ಪರೀಕ್ಷಾ ಕೇಂದ್ರಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ. ಸಿಇಟಿ ಫಲಿತಾಂಶಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟನ್ನು ನೋಡಬಹುದು.
(ದಟ್ಸ್ ಕನ್ನಡ ವಾರ್ತೆ)