ವಿದ್ಯಾರ್ಥಿಗಳ ದುರ್ವರ್ತನೆಗೆ ಬಲಿಯಾದ ತಂದೆ
ಮಡಿಕೇರಿ, ಮೇ.22 : ರ್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರ ನಡುವೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ನಗರದ ಎಫ್ ಎಂಸಿ ಕಾಲೇಜಿನಲ್ಲಿ ನಡೆದಿದೆ.
ನೇತಾಜಿ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಹಾಗೂ ಮಲೆನಾಡು ವಲಯದ ವಲಯದ ಕಾಂಗ್ರೆಸ್ ಅಧ್ಯಕ್ಷ ರಘುನಾಥ ಮಾರ್ಲ (58) ಮೃತಪಟ್ಟಿದ್ದಾರೆ. ಘಟನೆ ಕ್ಷಣಾರ್ಧದಲ್ಲಿ ಹರಡಿ ನೂರಾರು ಮಂದಿ ಮಾರ್ಲ ಶವವಿದ್ದ ಜಿಲ್ಲಾಸ್ಪತ್ರೆಗೆ ಧಾವಿಸಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಮಲೆನಾಡು ಗ್ರಾಮದ ವಿಶ್ವನಾಥರ ಮಗ ಭರತ್ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಥಮ ವರ್ಷದ ಬಿಬಿಎಂ ಪ್ರವೇಶಕ್ಕೆ ಅರ್ಜಿ ತರಲು ನಗರದ ಎಫ್ ಎಂಸಿ ಕಾಲೇಜಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಕ್ಯಾಂಪಸ್ ನಲ್ಲಿದ್ದ ಕೆಲವು ಹಿರಿಯ ವಿದ್ಯಾರ್ಥಿಗಳು ಭರತ್ ನನ್ನು ಕರೆದು ಪ್ಯಾಂಟ್ ಕಳಚುವಂತೆ ಬೆದರಿಕೆಯೊಡ್ಡಿದರು ಎನ್ನಲಾಗಿದೆ. ಹಿರಿಯ ವಿದ್ಯಾರ್ಥಿಗಳು ಒತ್ತಡಕ್ಕೆ ಮಣಿದ ಭರತ್ ಪ್ಯಾಂಟ್ ಕಳಚಿದ ನಂತರ ವಿದ್ಯಾರ್ಥಿಯೊಬ್ಬ ಆತನ ಮೇಲೆ ಹಲ್ಲೆ ನಡೆಸಿದ ಎಂದು ಆರೋಪಿಸಲಾಗಿದೆ.
ಇದನ್ನು ಭರತ್ ಮನೆಯವರಿಗೆ ತಿಳಿಸಿದ್ದರಿಂದ ಭರತ್ ಪೋಷಕರು ಕಾಲೇಜಿಗೆ ಆಗಮಿಸಿದ್ದಾರೆ. ಆಗ ಭರತ್ ನ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ. ವಿದ್ಯಾರ್ಥಿಯೊಬ್ಬ ರಘುನಾಥ್ ಮಾರ್ಲ ಅವರನ್ನ ತಳ್ಳಿದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾರ್ಲ ಕುಸಿದು ಬಿದ್ದು ಪ್ರಜ್ಞೆ ತಪ್ಪಿದರು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತಾದರೂ ರಘುನಾಥ ಅವರ ಪ್ರಾಣ ಪಕ್ಷಿ ಹಾರಿಹೋಗಿರುವುದನ್ನು ವೈದ್ಯರು ದೃಡಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)