ದಿಲ್ಲಿ ಪ್ರತಿನಿಧಿ : ಸುಭಾಷ್ ಭರಣಿಗೆ ಕೊಕ್
ಬೆಂಗಳೂರು, ಮೇ.21 : ಲೋಕಸಭೆ ಫಲಿತಾಂಶ ನೋಡಿಕೊಂಡು ಹಲವರ ಭವಿಷ್ಯ ನಿರ್ಧರಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ರಾಜ್ಯ ಸರಕಾರದ ದೆಹಲಿ ಪ್ರತಿನಿಧಿ ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಭರಣಿ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಿ ರೇಷ್ಮೆ ಕೈಗಾರಿಕೆ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಖಾಲಿಯಾಗಿರುವ ದೆಹಲಿ ಪ್ರತಿನಿಧಿ ಸ್ಥಾನಕ್ಕೆ ಬೈಕೆರೆ ನಾಗೇಶ್ ಅವರನ್ನು ನೇಮಿಸಲಾಗಿದೆ.
ವಿಶೇಷ ಪ್ರತಿನಿಧಿಯಾಗಿ ನೇಮಕಗೊಂಡು ಹಲವು ತಿಂಗಳು ಕಳೆದರೂ ಸುಭಾಷ್ ಭರಣಿ ದಿಲ್ಲಿಯಲ್ಲಿ ಕಚೇರಿ ತೆರೆಯಲಿಲ್ಲ. ಸಿಬ್ಬಂದಿ ನೇಮಿಸಿಕೊಳ್ಳಲಿಲ್ಲ. ರಾಜ್ಯದ ಯೋಜನೆಗಳ ಪರ ಲಾಭಿ ನಡೆಸಲಿಲ್ಲ ಎನ್ನುವ ದೂರು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬದಲಿಸುವಂತೆ ಒತ್ತಡ ಬಂದಿತ್ತು. ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ದೆಹಲಿಗೆ ತೆರೆಳಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಲ್ಲಿ ಸುಭಾಷ್ ಭರಣಿ ಇಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಮಾಧ್ಯಮ ಸಲಹೆಗಾರ ಆರ್ ಪಿ ಜಗದೀಶ್ ಮತ್ತು ಕಾನೂನು ಸಲಹೆಗಾರ ದಿವಾಕರ್ ಅವರನ್ನೇ ಅವಲಂಭಿಸಬೇಕಿತ್ತು. ಇದರ ನಂತರ ಯಡಿಯೂರಪ್ಪ ದೆಹಲಿ ಪ್ರತಿನಿಧಿಯನ್ನು ಬದಲಿಸುವ ತೀರ್ಮಾನ ಕೈಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications