ಎಚ್ಡಿಕೆ ಸಂಪುಟಕ್ಕೆ : ಸಿದ್ದು ತೀವ್ರ ವಿರೋಧ

ಚಾಮರಾಜನಗರ ಮತ್ತು ಮೈಸೂರು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿಲು ಸಿದ್ದು ಪ್ರಮುಖ ಪಾತ್ರ ವಹಿಸಿದ್ದಾರೆ. ಖರ್ಗೆ ತೆರವುಗೊಳಿಸಿರುವ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಸಿದ್ದು ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಸಿದ್ದು ಬಿಟ್ಟರೆ ಮೈಸೂರು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಎಚ್ ವಿಶ್ವನಾಥ್ ಕೆಪಿಸಿಸಿ ಗದ್ದುಗೆ ಏರುವ ಲಕ್ಷಣಗಳಿವೆ .ಆದರೆ, ಕುಮಾರಸ್ವಾಮಿ ಅವರು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಸಚಿವರಾಗುವುದು ಸಿದ್ದುಗೆ ಎಳ್ಳಷ್ಟು ಇಷ್ಟವಿಲ್ಲ.
ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಾಗ ಜೆಡಿಎಸ್ ಪಕ್ಷ ಯುಪಿಎ ಸರಕಾರವನ್ನು ಬೆಂಬಲಿಸಲಿಲ್ಲ ಎನ್ನುವ ಆರೋಪ ಸಿದ್ದು ಆಪ್ತ ವಲಯದಿಂದ ಕೇಳಿ ಬಂದಿದೆ. ಯುಪಿಎ ಸರಕಾರಕ್ಕೆ ಜೆಡಿಎಸ್ ಬೆಂಬಲ ನೀಡುವುದು ಕೆಲ ಹಿರಿಯ ಕಾಂಗ್ರೆಸ್ ಮುಖಂಡರಿಗೆ ಅಚ್ಚರಿ ತಂದಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ರಾಜ್ಯದ ಬಳ್ಳಾರಿ, ಶಿವಮೊಗ್ಗ ಸೇರಿ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ. ಅಲ್ಲದೇ ಫಲಿತಾಂಶಕ್ಕೂ ಒಂದು ದಿನದ ಮುಂಚೆ ಕುಮಾರಸ್ವಾಮಿ ಅವರು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಯುಪಿಎಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ಹೈಕಮಾಂಡ್ ಕುಮಾರಸ್ವಾಮಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ರೆಡ್ಡಿಗಳ ಸೊಕ್ಕಡಗಿಸಲು ದೇವೇಗೌಡರ ತಂತ್ರ
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ











Click it and Unblock the Notifications