ತಂದೆಯ ಸೋಲಿನ ಸೇಡು ತೀರಿಸಿಕೊಂಡ ಮಗ
ಕಳೆದ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಮಾಡಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ನ ತೇಜಸ್ವಿನಿ ರಮೇಶ್ ಗೌಡ ಅವರ ಕೈಯಲ್ಲಿ ಅವಮಾನಕರ ರೀತಿಯಲ್ಲಿ ಸೋಲನ್ನು ಅನುಭವಿಸಿದ್ದರು. ಈ ಚುನಾವಣೆಯಲ್ಲಿ ಅದೇ ತೇಜಸ್ವಿನಿಯನ್ನು ದೇವೇಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಸೋಲಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದಾರೆ.
ಎದುರಾಳಿ ಯಾರೇ ಇರಲಿ ಗೆದ್ದೇ ಗೆಲ್ಲುವುದಾಗಿ ಟಾಂಟಾಂ ಹೊಡೆದಿದ್ದ ತೇಜಸ್ವಿನಿ ಗೌಡ ಕುಮಾರಸ್ವಾಮಿ ನಂತರದ ಸ್ಥಾನವನ್ನು ಕೂಡ ಪಡೆಯಲು ವಿಫಲರಾಗಿದ್ದಾರೆ. ಎರಡನೇ ಸ್ಥಾನವನ್ನು 'ಆಪರೇಷನ್ ಕಮಲ'ದ ಫಲಾನುಭವಿ ಸಿಪಿ ಯೋಗೀಶ್ವರ್ ಅವರು ಪಡೆದಿದ್ದಾರೆ. ತೇಜಸ್ವಿನಿ ಗೌಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಮಾರಸ್ವಾಮಿಗೆ ಗೆಲುವು ನಿರಾಯಾಸವಾಗಿ ಲಭಿಸಿದೆ. ಅವರು ಸಿಪಿ ಯೋಗೀಶ್ವರ್ ಅವರನ್ನು 1ಲಕ್ಷ 30 ಸಾವಿರ ಮತಗಳ ಅಂತರದಿಂದ ಸೋಲಿಸಿ ತಂದೆ ದೇವೇಗೌಡರೊಡನೆ ಸಂಸತ್ತನ್ನು ಪ್ರವೇಶಿಸಲಿದ್ದಾರೆ. ದೇವೇಗೌಡರು ಹಾಸನದಿಂದ ಜಯಶಾಲಿಯಾಗಿದ್ದಾರೆ.
ವಿಪರೀತ ಮಾತುಗಾರಿಕೆ, ಕೇಂದ್ರದಲ್ಲಿ ಅತಿಯಾದ ವರ್ಚಸ್ಸು ತೋರಿಸಿದ್ದು ಮತ್ತು ರಾಜ್ಯದ ನಾಯಕರನ್ನು ಕೇವಲವಾಗಿ ಕಂಡು ವಿರೋಧ ಕಟ್ಟಿಕೊಂಡಿದ್ದು ತೇಜಸ್ವಿನಿ ಗೌಡರ ಸೋಲಿಗೆ ಪ್ರಮುಖ ಕಾರಣವಾಗಿದೆ. ವಿಪರೀತ ಆತ್ಮವಿಶ್ವಾಸವೇ ಅವರ ಗೆಲುವಿಗೆ ಮುಳುವಾಗಿದೆ. ತೇಜಸ್ವಿನಿ ಬಾಯಿಗೆ ಬೆಂಗಳೂರು ಗ್ರಾಮಾಂತರ ಮತದಾರರೇ ಬೀಗ ಜಡಿದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)