ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರಿಗೆ ದ್ರೋಹ ಬಗೆಯಲಾರೆ : ರಾಘವೇಂದ್ರ

By * ಶಿ.ಜು. ಪಾಶಾ, ಶಿವಮೊಗ್ಗ
|
Google Oneindia Kannada News

BY Raghavendra
ಶಿವಮೊಗ್ಗ,ಮೇ 16 : ಮತದಾರರ ನಂಬಿಕೆಗೆ ದ್ರೋಹ ಬಗೆಯಲಾರೆ ಎಂದು ಶಿವಮೊಗ್ಗ ಕ್ಷೇತ್ರದ ವಿಜಯೀ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಮೊದಲ ಬಾರಿಗೆ ಸ್ಪರ್ಧಿಸಿದ ರಾಘವೇಂದ್ರ ಕಾಂಗ್ರೆಸ್ ನ ಹಿರಿಯ ನಾಯಕ ಬಂಗಾರಪ್ಪ ಅವರನ್ನು 52,394 ಮತಗಳ ಅಂತರದಿಂದ ಸೋಲಿಸಿ ಅಚ್ಚರಿಯನ್ನು ತಂದಿದ್ದಾರೆ.

ಅವರು ಇಂದು ಮಧ್ಯಾಹ್ನ ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಪಕ್ಷ ಟಿಕೇಟ್ ನೀಡಿದೆ. ಮತದಾರರು ನನ್ನನ್ನು ಅತ್ಯಧಿಕ ಮತ ನೀಡಿ ಗೆಲ್ಲಿಸಿದ್ದಾರೆ. ಮತದಾರರಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಮತದಾರರಿಗೆ ದ್ರೋಹ ಬಗೆಯಲಾರೆ. ಅವರ ಋಣ ತೀರಿಸುವೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಶಿವಮೊಗ್ಗವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವೆ ಎಂದರು.

ಪಕ್ಷದ ಹಿರಿಯರು, ಬಿಜೆಪಿಯ ಶಾಸಕರುಗಳು, ಪ್ರಮುಖವಾಗಿ ಕಾರ್ಯಕರ್ತರು ಒಟ್ಟಾಗಿ ನನ್ನನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದಾರೆ. ವಿಶೇಷವಾಗಿ ಬೈಂದೂರು ಕ್ಷೇತ್ರದ ಜನರಿಗೆ ನಾನು ಕೃತಜ್ಞತೆ ಹೇಳಬೇಕು. ಅಲ್ಲಿಯ ಲಕ್ಷ್ಮೀನಾರಾಯಣ್‌ರವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದು ನುಡಿದರು.

ಇದು ತಂದೆಯ ಗೆಲುವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಂದೆಯ ಗೆಲುವು ಎನ್ನುವುದಕ್ಕಿಂತ ಇದು ಪಕ್ಷದ ಗೆಲುವು. ಅಭಿವೃದ್ಧಿಯನ್ನು ನೋಡಿ ಜನತೆ ಮತ ನೀಡಿದ್ದಾರೆ. ವಾಜಪೇಯಿ, ಅಡ್ವಾಣಿಯವರ ಆದರ್ಶಗಳು ಇಲ್ಲಿ ಕೆಲಸ ಮಾಡಿವೆ ಎಂದರು. ಜೆಡಿಎಸ್, ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದ್ದರೂ ಶಿವಮೊಗ್ಗ ಸೇರಿದಂತೆ ಅನೇಕ ಕಡೆ ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಕಳೆದ ಬಾರಿಯೂ ಕೂಡ ಬಂಗಾರಪ್ಪನವರು ಜೆಡಿಎಸ್‌ನ ಬೆಂಬಲವನ್ನು ಪಡೆದಿದ್ದರು. ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಕುತಂತ್ರಗಳು ಇಲ್ಲಿ ನಡೆಯಲಿಲ್ಲ ವಿಶ್ಲೇಷಿಸಿದರು.

ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕ ಸಂಗಮೇಶ್ ಮತ್ತು ಜೆಡಿಎಸ್‌ನ ಅಪ್ಪಾಜಿ ಗೌಡರು ಈ ಬಾರಿಯ ಚುನಾವಣೆಯಲ್ಲಿ ತಟಸ್ಥ ವಹಿಸಿದ್ದರು. ಅದರಲ್ಲೂ ಸಂಗಮೇಶ್ ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರಿಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಅಲ್ಲಿ ಬಿಜೆಪಿಗೆ ಅತ್ಯಂತ ಹೆಚ್ಚಿನ ಬಹುಮತ ಸಿಗಬಹುದೆಂದು ನಿರೀಕ್ಷೆ ಇತ್ತು. ಆದರೆ, ಅಲ್ಲಿನ ಹೊಸ ಕಾಂಗ್ರೆಸ್ ಮುಖಂಡರ ಶ್ರಮದ ಫಲವಾಗಿ ಬಂಗಾರಪ್ಪನವರು ಹೆಚ್ಚಿನ ಮತಗಳನ್ನು ಗಳಿಸಲು ಸಾಧ್ಯವಾಯಿತು.

ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ಸಾಗರ, ಬೈಂದೂರು ಕ್ಷೇತ್ರಗಳ ಜನತೆ ರಾಘವೇಂದ್ರ ಅವರ ಕೈಹಿಡಿದರೆ, ಬಂಗಾರಪ್ಪನವರ ಕೈ ಬಿಟ್ಟಿದ್ದಾರೆ. ಆದರೆ, ತೀರ್ಥಹಳ್ಳಿ, ಸೊರಬದಲ್ಲಿ ಬಂಗಾರಪ್ಪನವರಿಗೆ ಹೆಚ್ಚಿನ ಮತಗಳು ದೊರೆತಿವೆ.

ಮತ ಪಡೆದ ಅಭ್ಯರ್ಥಿಗಳ ವಿವರ
ಜೆ. ಜಯಪ್ಪ (ಬಿಎಸ್‌ಪಿ) 8204
ಎಸ್.ಬಂಗಾರಪ್ಪ (ಕಾಂಗ್ರೆಸ್) 429796
ಬಿ.ವೈ.ರಾಘವೇಂದ್ರ (ಬಿಜೆಪಿ) 482470
ಸಿ. ಮುರುಗನ್ (ಎಐಜೆಎಂಕೆ) 6046
ಅಖಿಲ್ ಅಹಮ್ಮದ್ (ಸ್ವತಂತ್ರ) 1827
ಡಿ.ಎಸ್.ಈಶ್ವರಪ್ಪ (ಸ್ವತಂತ್ರ) 1917
ಉಮೇಶ್ ಕುಮಾರ್.ಎಸ್. (ಸ್ವತಂತ್ರ) 1355
ಎಂ. ದಿನೇಶ್ ಕುಮಾರ್ (ಸ್ವತಂತ್ರ) 2141
ಮೊಹಿನುದ್ದೀನ್ ಎಂ.ಎಸ್. (ಸ್ವತಂತ್ರ) 1717
ಮಂಜಪ್ಪ ಎಸ್ (ಸ್ವತಂತ್ರ) 3107
ಎಂ.ಪಿ.ಶ್ರೀಧರ್ ಬೈಂದೂರ್ (ಸ್ವತಂತ್ರ) 4565
ಹೆಚ್.ಎಸ್.ಶೇಖರಪ್ಪ (ಸ್ವತಂತ್ರ) 10847
ಒಟ್ಟು 953972

ಪೂರಕ ಓದಿಗೆ
ರಾಘು ಗೆಲುವಿಗೆ ಸಿದ್ಧವಾಗಿರುವ ಪಟಾಕಿ, ಸ್ವೀಟು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X