ಯುಪಿಎ ಮುಂದೆ, ತೃತೀಯ ರಂಗ ಕಿಂಗ್ ಮೇಕರ್
ನವದೆಹಲಿ, ಮೇ. 14 : ಹದಿನೈದನೇ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲು ದಿನಗಣನೆ ಆರಂಭವಾಗಿದ್ದು, ಬುಧವಾರ ವಿವಿಧ ಟಿವಿ ವಾಹಿನಿಗಳು ಪ್ರಕಟಿಸಿರುವ ಮತಗಟ್ಟೆ ಸಮೀಪ ಸಮೀಕ್ಷೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸಂಖ್ಯಾ ಬಲದಲ್ಲಿ ಮುಂದಿದೆ. ಸರಕಾರ ರಚನೆಯಲ್ಲಿ ತೃತೀಯ ರಂಗ ನಿರ್ಣಾಯಕ ಪಾತ್ರ ವಹಿಸಲಿದೆ.
ಯುಪಿಎ 198 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಎನ್ ಡಿಎ 183, ತೃತೀಯ ರಂಗ 112 ಸ್ಥಾನ ಗಳಿಸಲಿದೆ ಎಂದು ವಾಹಿನಿಗಳು ಹೇಳಿವೆ. ಕಾಂಗ್ರೆಸ್ 154 ಸ್ಥಾನ ಗಳಿಸುವ ನಿರೀಕ್ಷೆಯಿದ್ದು, ಯುಪಿಎ ಇತರೆ ಪಕ್ಷಗಳು 44 ಸ್ಥಾನ ಗಳಿಸುವ ಸಾಧ್ಯತೆ ಇದೆ. ಬಿಜೆಪಿ 142 ಸ್ಥಾನ ಗಳಿಸಲಿದ್ದು, ಅದರ ಇತರೆ ಪಕ್ಷಗಳು 41 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿವೆ. ತೃತೀಯ ರಂಗದಲ್ಲಿ ಎಡಪಕ್ಷಗಳು 38, ಬಿಎಸ್ ಪಿ 27, ಟಿಡಿಪಿ 20 ಹಾಗೂ ಜೆಡಿಎಸ್ 3 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಸಮಾಜವಾದಿ ಪಕ್ಷ 23 ಸ್ಥಾನ ಗಳಿಸಲಿದೆ. ಬಿಜು ಜನತಾ ದಳ 8, ಆರ್ ಜೆಡಿ ಹಾಗೂ ಎಲ್ ಜೆಪಿ 6, ಚಿರಂಜೀವಿ ಅವರ ಪ್ರಜಾರಾಜ್ಯ ಪಕ್ಷ 4 ಸ್ಥಾನ ಗಳಸುವ ಸಂಭವವಿದೆ. ಬಿಎಸ್ಪಿ 27ಕ್ಕಿಂತ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆಯಿದ್ದು, ಆ ಪಕ್ಷ ನಾಯಕಿ ಮಾಯಾವತಿ ಹಾಗೂ 24ಕ್ಕಿಂತ ಹೆಚ್ಚು ಸ್ಥಾನ ಗಳಿಸಲಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ಕೇಂದ್ರ ಸರಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
(ಏಜನ್ಸೀಸ್)