ಪಿಎಂ ಹುದ್ದೆ ಮೇಲೆ ಶರದ್ ಪವಾರ್ ಕಣ್ಣು
ಸಿಎನ್ಎನ್-ಐಬಿಎನ್ ವಾರ್ತಾ ವಾಹಿನಿ ಪ್ರಕಾರ, ಯುಪಿಎಗೆ ಸರಕಾರ ರಚಿಸಲು ಅಗತ್ಯ ಸಂಖ್ಯಾಬಲ ಕೊರತೆ ಬಿದ್ದಲ್ಲಿ ಶರದ್ ಪವಾರ್ ಅವರು ಯುಪಿಎಯಿಂದ ಹೊರಬಂದು ತೃತೀಯ ರಂಗ ಮತ್ತು ಚತುರ್ಥ ರಂಗದ ಬೆಂಬಲ ಪಡೆದುಕೊಂಡು ಪ್ರಧಾನಿ ಆಗುವ ಸಾಧ್ಯತೆಗಳಿವೆ. ಇಷ್ಟಾದರೂ ಅಗತ್ಯ ಸಂಖ್ಯಾಬಲ ಕಡಿಮೆಯಾದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ಕೇಳುವ ಸಾಧ್ಯತೆಗಳೂ ಇವೆ ಎಂದು ಅದು ವರದಿ ಮಾಡಿದೆ.
ತೃತೀಯರಂಗ ಒಡೆದ ಮನೆ ಆಗಿದ್ದು, ಅದರಿಂದ ಎಂದಿಗೂ ಸರಕಾರ ರಚನೆ ಸಾಧ್ಯವಿಲ್ಲ ಎಂದು ಎನ್ ಡಿಎ ಹಾಗೂ ಯುಪಿಎಗಳು ತಳ್ಳಿಹಾಕಿರುವ ಬೆನ್ನಲ್ಲೇ ಶರದ್ ಪ್ರವೇಶಿಸುತ್ತಾರೆ ಎಂಬ ಸುದ್ದಿ ದಟ್ಟವಾಗುತ್ತಿದ್ದಂತೆಯೇ ತೃತೀಯ ರಂಗದ ವೇದಿಕೆ ಮತ್ತಷ್ಟು ಮೀರಿಮೀರಿ ಮಿಂಚತೊಡಗಿದೆ. ಅಲ್ಲದೇ, ಶರದ್ ಪವಾರ್ ಪ್ರಧಾನಮಂತ್ರಿಯಾಗುವ ಅವಕಾಶ ಒದಗಿ ಬಂದರೆ ಎನ್ ಡಿಎದಲ್ಲಿರುವ ಶಿವಸೇನೆ ಕೂಡಾ ತೃತೀಯ ರಂಗಕ್ಕೆ ಬೆಂಬಲ ನೀಡುವುದನ್ನು ತಳ್ಳಹಾಕುವಂತಿಲ್ಲ. ಚುನಾವಣೋತ್ತರ ಫಲಿತಾಂಶದಲ್ಲಿ ಎಡಪಕ್ಷಗಳು, ಎಐಎಡಿಎಂಕೆ, ತೆಲುಗು ದೇಶಂ ಹಾಗೂ ಜೆಡಿಎಸ್ ಸೇರಿ 100 ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿವೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ತೃತೀಯ ರಂಗದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ವಾಹಿನಿ ವರದಿ ಮಾಡಿದೆ.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು