ಸಿದ್ದುಗೆ ಕನ್ನಡಿಯೊಳಗಿನ ಗಂಟಾದ ಪ್ರತಿಪಕ್ಷ ಹುದ್ದೆ
ಬೆಂಗಳೂರು, ಮೇ. 12 : ಪ್ರತಿಪಕ್ಷ ಸ್ಥಾನಕ್ಕೆ ಹೈಕಮಾಂಡ್ ಮಟ್ಟದಲ್ಲಿ ಭಾರೀ ಲಾಬಿ ನಡೆದಿದೆ ಎಂದು ಹೇಳಲಾಗಿದ್ದು, ರಾಜ್ಯಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಜಿ ಪರಮೇಶ್ವರ್ ಆ ಸ್ಥಾನ ಅಲಂಕರಿಸಲು ಶತಪ್ರಯತ್ನ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ತಯಾರಿ ನಡೆಸುತ್ತಿರುವ ಕಾಲದಲ್ಲೇ ಈ ಇಬ್ಬರು ನಾಯಕರು ಆ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿರುವುದು ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರನ್ನು ಮತ್ತೆ ಹೈಕಮಾ೦ಡ್ ನಿರ್ಲಕ್ಷಿಸಿದರೆ ಅಚ್ಚರಿ ಏನೂ ಇಲ್ಲ ಎಂದು ಗೊತ್ತಾಗಿದೆ. ಸದ್ಯ ಗುಲ್ಬರ್ಗಾ ಕ್ಸೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಲ್ಲಿಕಾರ್ಜುನ ಖರ್ಗೆ ತೆರವು ಮಾಡುವ ಜಾಗಕ್ಕೆ ಶಿವಕುಮಾರ್ ಮತ್ತು ಪರಮೇಶ್ವರ್ ಲಾಬಿ ನಡೆಸುತ್ತಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಡಿಕೆಶಿ ಮತ್ತು ಪರಮೇಶ್ವರ್ ಹೈಕಮಾ೦ಡ್ ಮಟ್ಟದಲ್ಲಿ ತಮಗೆ ಆಪ್ತರಾದ ನಾಯಕರ ಮುಖಾಂತರ ಪ್ರಯತ್ನ ನಡೆಸುತ್ತಿದ್ದಾರೆ.
ಪರಮೇಶ್ವರ್ ಎರಡು ದಶಕಗಳಿಗೂ ಹೆಚ್ಚು ಕಾಲದಿ೦ದ ಪಕ್ಷದ ನಿಷ್ಟಾವಂತ ಸಿಪಾಯಿಯಾಗಿ ದುಡಿದ ತನಗೆ ಆ ಸ್ಥಾನ ಸಿಗಬೇಕೆ೦ದು ಹೈಕಮಾ೦ಡ್ ಮುಂದೆ ವಿವರಿಸಿದ್ದಾರೆ. ಖರ್ಗೆ ದಲಿತ ನಾಯಕರಾಗಿದ್ದರಿ೦ದ ಆ ಸ್ಥಾನ ಮತ್ತೆ ಮತ್ತೋರ್ವ ದಲಿತ ನಾಯಕರಿಗೆ ಸಿಗಬೇಕೆನ್ನುವುದು ಪರಮೇಶ್ವರ್ ವಾದ. ಇತ್ತ ಡಿಕೆಶಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕಾ೦ಗ್ರೆಸ್ ಒಬ್ಬ ಒಕ್ಕಲಿಗ ನಾಯಕನನ್ನು ತರುವುದು ಸೂಕ್ತ ಎ೦ದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಸಿದ್ದುಗೆ ಕಾದಿರಿಸಿದ ಪಟ್ಟ ಎ೦ಬ ಅಭಿಪ್ರಾಯ ದಟ್ಟವಾಗಿದ್ದ ಸಮಯದಲ್ಲೇ ಡಿಕೆಶಿ ಮತ್ತು ಪರಮೇಶ್ವರ್ ಆ ಸ್ಥಾನಕ್ಕೆ ಲಾಬಿ ನಡೆಸುತ್ತಿರುವುದು ಕುತೂಹಲ ಸೃಷ್ಟಿಸಿದೆ. ಹೈಕಮಾ೦ಡ್ ಸಿದ್ದುಗೆ ಈ ಸ್ಥಾನ ನೀಡುತ್ತೋ ಅಥವಾ "ಗಣೇಶನ ಮದುವೆ" ಮಾಡುತ್ತೋ?
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications