ಲೂಧಿಯಾನಾದಲ್ಲಿ ಎನ್ ಡಿಎ ಶಕ್ತಿ ಪ್ರದರ್ಶನ
ಲೂಧಿಯಾನಾ, ಮೇ. 10 : ತೃತೀಯ ರಂಗ ರಚನೆಯ ನಂತರ ಸಪ್ಪೆ ಎನಿಸಿದ್ದ ಎನ್ ಡಿಎ ಇಂದು ಕೈಗಾರಿಕಾ ನಗರ ಲೂಧಿಯಾನಾದಲ್ಲಿ ಒಕ್ಕೂಟದ ಬೃಹತ್ ಸಮಾವೇಶ ಏರ್ಪಡಿಸುವ ಮೂಲಕ ಪ್ರತಿಸ್ಪರ್ಧಿಗಳಿಗೆ ಒಗ್ಗಟ್ಟಿನ ಸಂದೇಶವನ್ನು ರವಾನಿಸಿತು. ಎನ್ ಡಿಎ ದಲ್ಲಿ ಗುರುತಿಸಿಕೊಂಡಿರುವ ಎಲ್ಲ ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಮಾತನಾಡಿದ ಪ್ರತಿ ಮುಖಂಡರು ಕೂಡಾ ಈ ಸಲ ಎನ್ ಡಿಎ ಕೇಂದ್ರದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳುವುದನ್ನು ಮರೆಯಲಿಲ್ಲ.
ಚುನಾವಣೆ ಪೂರ್ವದಲ್ಲಿ ತೆಲುಗು ದೇಶಂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖ್ಯಸ್ಥ ಚಂದ್ರಶೇಖರರಾವ್ ಎನ್ ಡಿಎದಲ್ಲಿ ನೂತನವಾಗಿ ಸೇರ್ಪಡೆಗೊಂಡರೆ, ಯುಪಿಎ ಇಲ್ಲವೇ ತೃತೀಯ ರಂಗದೊಂದಿಗೆ ಸೇರಿಕೊಳ್ಳುತ್ತಾರೆ ಎನ್ನುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದು ಎನ್ ಡಿಎ ಶಕ್ತಿ ಪ್ರದರ್ಶನಕ್ಕೆ ಮತ್ತಷ್ಟು ಇಂಬು ಕೊಟ್ಟಂತಾಯಿತು.
ತೃತೀಯರಂಗದಲ್ಲಿರುವ ಪ್ರಾದೇಶಿಕ ಪಕ್ಷಗಳ ಮೇಲೆ ಕಣ್ಣಿಟ್ಟಿರುವ ಎನ್ ಡಿಎ ಮುಖಂಡರು ಇದಕ್ಕೆ ಸಂಬಂಧಿಸಿದಂತೆ ಬಿರುಸಿನ ಚಟುವಟಿಕೆ ಆರಂಭಿಸಿದ್ದಾರೆ. ಆರಂಭದಲ್ಲಿ ಟಿಆರ್ಎಸ್ ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎನ್ ಡಿಎ, ಇದೀಗ ತೆಲುಗು ದೇಶಂ ಪಕ್ಷಕ್ಕೆ ಗಾಳ ಹಾಕಿರುವ ಸೂಚನೆ ಲಭ್ಯವಾಗಿದೆ. ಈ ಐತಿಹಾಸಿಕ ಎನ್ ಡಿಎ ಸಮಾವೇಶ ಐದನೇ ಹಾಗೂ ಅಂತಿಮ ಹಂತದ ಚುನಾವಣೆಗೆ ಅನುಕೂಲವಾಗಲಿದೆ ಎನ್ನುವುದು ಕೇಸರಿಪಡೆಯ ನಾಯಕರು ಲೆಕ್ಕಾಚಾರವಾಗಿದೆ.
ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ, ಅರುಣ್ ಜೈಟ್ಲಿ, ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಶರದ್ ಯಾದವ್, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್, ಅವರ ಮಗ ಸುಖ್ಬೀರ್ ಸಿಂಗ್ ಬಾದಲ್, ತೆಲಂಗಾಣ ರಾಷ್ಟ್ರೀಯ ಸಮಿತಿಯ ಚಂದ್ರಶೇಖರ್ ರಾವ್, ಶಿವಸೇನೆ ಮುಖ್ಯಸ್ಥ ಮನೋಹರ ಜೋಶಿ ಅಲ್ಲದೇ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
(ಏಜನ್ಸೀಸ್)
ನಿತೀಶ್
ವಿರುದ್ಧದ
ಹೇಳಿಕೆಗೆ
ಬೆಲೆತೆತ್ತ
ಮೊಯ್ಲಿ
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು