ಅಂತರಗಂಗಾ ವಿವಿ ಸ್ಥಾಪನೆಗೆ ನಿಯೋಗದ ಮನವಿ
ಕೋಲಾರ, ಮೇ. 05 : ಈ ಪ್ರದೇಶದ ಶೈಕ್ಷಣಿಕ ಪ್ರಗತಿಯ ಮೂಲಕ ಸರ್ವಾಂಗೀಣ ಅಭಿವೃದ್ಧಿಗಾಗಿ ನಗರದ ಸಮೀಪದಲ್ಲಿ ಅಂತರ ಗಂಗಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂಬ ಹಕ್ಕೊತ್ತಾಯದ ಮನವಿಯನ್ನು ಬೆಂಗಳೂರು ವಿವಿ ವಿಭಜನಾ ಶಿಫಾರಸು ಸಮಿತಿಯ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ವಿವಿ ಚಾಲನಾ ಸಮಿತಿಯ ಸದಸ್ಯರು ಸಲ್ಲಿಸಿ ಜಿಲ್ಲೆಗೆ ವಿವಿ ಅಗತ್ಯ ಲಭ್ಯ ಸಂಪನ್ಮೂಲಗಳ ವಿವರ ನೀಡಿದರು.
ಬೆಂಗಳೂರು ವಿವಿ ವಿಭಜನಾ ಸಮಿತಿಯ ಅಧ್ಯಕ್ಷ, ವಿಶ್ರಾಂತ ಕುಲಪತಿ ಡಾ ಎನ್.ರುದ್ರಯ್ಯನವರು ಸಮಿತಿಯು ಭೌಗೋಳಿಕ ಆಧಾರದ ಮೇಲೆ ಮೂರು ವಿವಿಗಳನ್ನಾಗಿ ವಿಭಜಿಸಲು ತಾತ್ವಿಕವಾಗಿ ನಿರ್ಧರಿಸಲಾಗಿದ್ದು, ಸ್ಥಳ ಪರಿಶೀಲನೆ, ವಿದ್ಯಾರ್ಥಿ ಸಂಘಟನೆಗಳ ಜೊತೆ ಚರ್ಚೆ, ಪ್ರಾಂಶುಪಾಲರ, ಅಧ್ಯಾಪಕರ ಸಂಘಗಳ ಸಂಗಡ ಸಮಾಲೋಚನೆ, ಸ್ಥಳ ಪರಿಶೀಲನೆ, ಬೋಧಕೇತರ ಸಿಬ್ಬಂದಿಯ ಅಭಿಮತ, ಶಿಕ್ಷಣ ತಜ್ಞರ ಅಭಿಪ್ರಾಯ ಕೇಳಿಕೆ ಮೊದಲಾದವುಗಳನ್ನು ನಡೆಸಬೇಕಾಗಿದೆಯೆಂದೂ, ಸರ್ಕಾರ ತಿಳಿಸಿರುವಂತೆ ಇನ್ನು ಎರಡು ತಿಂಗಳಲ್ಲಿ ವರದಿ ನೀಡಿಕೆ ಅಸಾಧ್ಯವಾಗಿದ್ದು, ಸ್ವಲ್ಪ ವಿಳಂಬವಾಗಿ ವರದಿ ನೀಡುವುದಾಗಿ ನಿಯೋಗಕ್ಕೆ ತಿಳಿಸಿ, ಕೋಲಾರದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ಹೇಳಿದರು.
ಅಂತರಗಂಗಾ ವಿ.ವಿ. ಚಾಲನಾ ಸಮಿತಿ ಅಧ್ಯಕ್ಷ, ಕೋಲಾರ ಪತ್ರಿಕೆ ಸಂಪಾದಕ ಕೆ.ಪ್ರಹ್ಲಾದರಾವ್, ಸದಸ್ಯರಾದ ಗೋಕುಲ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನಾರಾಯಣಸ್ವಾಮಿ, ರಾಕ್ ವ್ಯಾಲಿ ಸಂಸ್ಥೆಯ ಪಿಳ್ಳಪ್ಪ, ಹಾಗೂ ಆದರ್ಶ ಶ್ರೀರಾಮ್, ಡಾ: ಮುರಳಿಧರ ಇವರು ವಿಭಜನಾ ಸಮಿತಿಯ ಸದಸ್ಯರಾದ ನಿವೃತ್ತ ಐಜಿಪಿ ಕೆ.ಸಿ.ರಾಮಮೂರ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ, ಶಿಕ್ಷಣ ತಜ್ಞ ಪ್ರೊ: ಕೆ.ನರಹರಿ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ: ಎಂ.ಗೋವಿಂದಯ್ಯ, ಮಾಜಿ ಉಪ ಕುಲಪತಿ ಡಾ: ಮರಿಯಮ್ಮ ವರ್ಗೀಸ್, ಪ್ರೊ: ಕೆ.ಜಿ.ಲೋಕೇಶ್, ವಾಣಿಜ್ಯ ವಿಭಾಗದ ಡಾ:ಈರೇಶಿ, ಕಸಾಪ ಖಜಾಂಚಿ ಪುಂಡಲೀಕ ಹಾಲಂಬಿ ಮೊದಲಾದವರನ್ನು ಭೇಟಿ ಮಾಡಿ, ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)