ಬಾಬ್ರಿ ಧ್ವಂಸ ಎಲ್ಲವೂ ಗುಟ್ಟುಗುಟ್ಟು : ಉಮಾ
ಆಲಿಘಡ, ಮೇ. 4 : 1992ರ ಡಿಸೆಂಬರ್ 6 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರೂ ಸತ್ಯ ಮರೆಮಾಚುತ್ತಿದ್ದಾರೆ. ಮಸೀದಿಯನ್ನು ಉರುಳಿಸಿದವರಿಗೆ ಮಾತ್ರ ಈ ವಿಚಾರ ತಿಳಿದಿತ್ತು. ಈ ವಿಚಾರದಲ್ಲಿ ನನಗೂ ಹೆಚ್ಚಿನ ಮಾಹಿತಿ ಇಲ್ಲ. ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಆಡ್ವಾಣಿ ಮತ್ತು ಆರೆಸ್ಸೆಸ್ನ ಶೇಷಾದ್ರಿ ಅವರು ಕೂಡಾ ಇದೇ ಅಭಿಪ್ರಾಯ ತಾಳಿದ್ದಾರೆಂದು ರಾಮಮಂದಿರ ನಿರ್ಮಾಣ ಚಳವಳಿಯ ಮುಂಚೂಣಿ ನಾಯಕಿ ಉಮಾಭಾರತಿ ಹೇಳಿದ್ದಾರೆ.
ಕಲ್ಯಾಣ್ ಸಿಂಗ್ ಅವರನ್ನು ಬಾಬ್ರಿ ಮಸೀದಿ ಧ್ವಂಸ ಮಾಡಿದ ವಿಚಾರದಲ್ಲಿ ಕತ್ತಲಿನಲ್ಲಿರಿಸಲಾಗಿತ್ತೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಉಮಾಭಾರತಿ, ಮಸೀದಿಯನ್ನು ಉರುಳಿಸಿದವರು ಯಾರು ಎಂಬುದನ್ನು ಇನ್ನಷ್ಟೆ ಗುರುತಿಸಬೇಕಾಗಿದೆ ಎಂದು ಉಮಾಭಾರತಿ ಹೇಳಿದ್ದಾರೆ.
ರಾಮಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ 'ಕರಸೇವೆ' ಮಾಡಲಾಗುವುದು ಎಂಬುದಾಗಿ ಮಾತ್ರ ತನಗೆ ತಿಳಿಸಲಾಗಿತ್ತು. ಆದರೆ ಮಸೀದಿ ಧ್ವಂಸ ವಿಚಾರ ನನಗೆ ತಿಳಿದಿರಲಿಲ್ಲ ಎಂದು ಇತ್ತೀಚೆಗಷ್ಟೇ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದ ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಈ ಹಿಂದೆ ಹೇಳಿಕೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications