ನಕ್ಸಲರ ಭೀತಿಯ ನಡುವೆಯೂ ಶಾಂತಿಯುತ ಮತದಾನ

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರು ಉತ್ಸಾಹದಿಂದ ಮತ ಹಾಕಿದರೂ ಒಟ್ಟಾರೆ ಮತದಾನ ಅಷ್ಟೇನೂ ಆಶಾದಾಯಕವಾಗಿಲ್ಲ. ಬೆಳಿಗ್ಗೆ ಏಳಕ್ಕೆ ಪ್ರಾರಂಭವಾಗಿ ಐದಕ್ಕೆ ಮುಗಿದ ಮತದಾನದಲ್ಲಿ ಕೇವಲ ಶೇ.51ರಷ್ಟು ಮಾತ್ರ ಮತದಾನವಾಗಿದೆ. ಅತಿ ಹೆಚ್ಚು ಮತದಾನ ದಕ್ಷಿಣ ಕನ್ನಡದಲ್ಲಾದರೆ ಅತಿ ಕಡಿಮೆ ಮತದಾನ ಹಾವೇರಿಯಲ್ಲಿ ಆಗಿದೆ. ಒಟ್ಟು ಶೇ.60ರಷ್ಟು ಮತ ಚಲಾವಣೆಯಾಗಿದೆ.
ಶೇಕಡಾವಾರು ಮತದಾನ ಹೀಗಿದೆ : ಬಾಗಲಕೋಟೆ(56), ಹಾವೇರಿ(53), ಧಾರವಾಡ(55), ದಾವಣಗೆರೆ(58), ಶಿವಮೊಗ್ಗ(61), ಉಡುಪಿ-ಚಿಕ್ಕಮಗಳೂರು(61), ಹಾಸನ(68), ದಕ್ಷಿಣ ಕನ್ನಡ(71), ಮಂಡ್ಯ(57), ಮೈಸೂರು(56) ಮತ್ತು ಚಾಮರಾಜನಗರ(57).
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (ಹಾಸನ), ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ (ಶಿವಮೊಗ್ಗ), ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದ ಗೌಡ (ಉಡುಪಿ-ಚಿಕ್ಕಮಗಳೂರು), ನಟ ಅಂಬರೀಷ್ (ಮಂಡ್ಯ), ಮಾಜಿ ಕೇಂದ್ರ ಸಚಿವ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ (ದಕ್ಷಿಣ ಕನ್ನಡ) ಇವರ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ದಾಖಲಾಗಿದೆ. ಮೊದಲ ಹಂತದ ಮತದಾನ ಏಪ್ರಿಲ್ 23ರಂದು 17 ಲೋಕಸಭೆ ಕ್ಷೇತ್ರಗಳಿಗೆ ಜರುಗಿತ್ತು. ಮೇ 16ರಂದು ಫಲಿತಾಂಶ ಹೊರಬೀಳಲಿದೆ.
ಮರುಮತದಾನಕ್ಕೆ ಆಗ್ರಹ : ಹಾಸನ ಲೋಕಸಭೆಯ 31 ಮತಗಟ್ಟೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ದಂಗೆ ಹಾಕಿ ಮತದಾನಕ್ಕೆ ಅಡ್ಡಿಪಡಿಸಿದ್ದರಿಂದ ಮತ್ತು ನಕಲಿ ಮತದಾನವಾಗಿದ್ದರಿಂದ ಮರುಮತದಾನ ನಡೆಸಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಬಿಜೆಪಿಯ ಕೇಶವ ಪ್ರಸಾದ್ ಆಯೋಗಕ್ಕೆ ಬರೆದ ಪತ್ರದಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರ ಮೇಲೆ ಅಂಗಿ ಹರಿದು ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿರುವುದಾಗಿಯೂ ಆರೋಪಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ ಶಿವರಾಮ್ ಕೂಡ ಇದೇ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣಾಧಿಕಾರಿಗೆ ನೋಟೀಸ್ : ಶಿಕಾರಿಪುರದಲ್ಲಿ ಹುರುಪಿನಿಂದ ಮತದಾನ ಮಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಲಗೈ ತೋರುಬೆರಳಿಗೆ ಅಷ್ಟೇ ಹುರುಪಿನಿಂದ ಶಾಯಿ ಹಾಕಿದ ಮತಗಟ್ಟೆಯ ಚುನಾವಣಾಧಿಕಾರಿಗೆ ಜಿಲ್ಲಾಧಿಕಾರಿ ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ. ಶಾಯಿ ಹಚ್ಚುವಾಗ ಛಾಯಾಚಿತ್ರಕಾರರ ದಂಡೇ ಅಲ್ಲಿ ನೆರೆದಿತ್ತು. ಅವರು ಕೂಡ ಹುರುಪಿನಿಂದಲೇ ಕ್ಲಿಕ್ಕಿಸುತ್ತಿದ್ದರು. ಎಲ್ಲರ ಮೊಗದಲ್ಲೂ ಹರುಷದ ಹೊಳೆ. ಈ ಸಂದರ್ಭದಲ್ಲಿ ಅಚಾತುರ್ಯವಾಗಿದ್ದು ಯಾರ ಗಮನಕ್ಕೂ ಬರಲೇ ಇಲ್ಲ.
ಮತದಾನ ಬಹಿಷ್ಕರಿಸಬೇಕೆಂದು ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಕ್ಸಲೀಯರು ನೀಡಿದ್ದ ಕರೆಯನ್ನು ಧಿಕ್ಕರಿಸಿ ನಾಗರಿಕರು ಉತ್ಸಾಹದಿಂದ ಮತ ಹಾಕಿದ್ದಾರೆ. ಬಹಿಷ್ಕಾರದ ಕರೆ ಅವರ ಮೇಲೆ ಎಳ್ಳಷ್ಟೂ ಪ್ರಭಾವ ಬೀರಿಲ್ಲ. ಮೂರೂ ಜಿಲ್ಲೆಗಳಲ್ಲಿ ಹೆಚ್ಚಿನ ಮತದಾನವಾಗಿರುವುದು ಕೂಡ ಕಂಡುಬಂದಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ












Click it and Unblock the Notifications