ಅನಂತಕುಮಾರ್ ಬ್ರಾಹ್ಮಣನೆ ದೇವೇಗೌಡ ಪ್ರಶ್ನೆ
ಹಾಸನ, ಏ. 28 : ನಿತ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಮುಗಿಬೀಳುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡ ಸೋಮವಾರ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಅನಂತಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅನಂತಕುಮಾರ್ ನಿಜವಾದ ಬ್ರಾಹ್ಮಣನೆ ? ಆರತಿ ತಟ್ಟೆಗೆ ಕಾಣಿಕೆ ಹಾಕುವ ಹಣ, ಅಕ್ರಮ ಹಣ ಹಂಚಿಕೆಯೆಂದು ನಂಬುವುದಾದರೆ ಚುನಾವಣಾ ಆಯೋಗವೇ ತನಿಖೆ ನಡೆಸಿ ಕ್ರಮಕೈಗೊಳ್ಳಲಿ ಎಂದು ಅವರು ಸವಾಲು ಹಾಕಿದ್ದಾರೆ.
ಹಾಸನ ತಾಲ್ಲೂಕಿನಲ್ಲಿ ಪ್ರಚಾರದ ವೇಳೆಯಲ್ಲಿ ದೇವೇಗೌಡರು ಮತದಾರರಿಗೆ ಹಣ ಹಂಚಿದ್ದಾರೆ ಎಂಬ ಬಿಜೆಪಿ ಆರೋಪಿಸಿ ಚುನಾವಣೆ ಆಯೋಗಕ್ಕೆ ದೂರು ನೀಡಿರುವ ಕುರಿತು ದೇವೇಗೌಡ ಈ ರೀತಿ ಪ್ರತಿಕ್ರಿಯಿಸಿದರು. ನಾವೇನಾದರೂ ಸಭೆ ನಡೆಸಿದ್ದೇವೆಯೇ ? ಚುನಾವಣೆ ನೀತಿ ಸಂಹಿತೆ ತಿಳಿದುಕೊಳ್ಳದಷ್ಟು ನಾನು ಚಿಕ್ಕವನೆ ? ಆಧಾರ ರಹಿತ ಆರೋಪಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೌಡರು ಹೇಳಿದರು.
ರಾಜ್ಯಕ್ಕೆ ದೇವೇಗೌಡರ ಕೊಡುಗೆ ಏನು ಅನಂತಕುಮಾರ್ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಎನ್ ಡಿಎ ಅಧಿಕಾರದಲ್ಲಿದ್ದಾಗ ರಾಜ್ಯ ಕೊಡುಗೆ ಏನು ಎಂದು ಬಿಜೆಪಿ ಮುಖಂಡರು ಹೇಳಲಿ. ಹಾಸನ- ಬೆಂಗಳೂರು ರೈಲು ಮಾರ್ಗವನ್ನು ನಾನು ಪ್ರಧಾನಿಯಾಗಿದ್ದಾಗ ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಗಣಿ ಪರವಾನಗಿಯನ್ನು ರದ್ದುಪಡಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದರೂ ಗಣಿಗಾರಿಕೆಯನ್ನು ಮುಂದುವರಿಸುವುದಾಗಿ ಸಚಿವ ಜನಾರ್ದನರೆಡ್ಡಿ ಅವರು ಹೇಳಿರುವ ಬಗ್ಗೆ ಪ್ರತಿಕ್ರಿಯಿದ ಅವರು, ಕೇಂದ್ರದ ಸರಕಾರ ಮಾಡಿರುವ ಆದೇಶವನ್ನು ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಸಾಧ್ಯವಾದರೆ ನ್ಯಾಯಾಲಯದ ಮೊರೆ ಹೋಗಲೂ ಚಿಂತನೆ ನಡೆಸಬೇಕು ಎಂದು ದೇವೇಗೌಡ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications