ತೃತೀಯ ರಂಗದ ವ್ಯಕ್ತಿಯೇ ಪ್ರಧಾನಿ : ದೇವೇಗೌಡ

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ರಾಜಕಾರಣದಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಈ ಬಾರಿ ದೇಶ ಅಚ್ಚರಿಯ ಫಲಿತಾಂಶ ಕಾಣಲಿದೆ ಎಂದರು. ತೃತೀಯ ರಂಗ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಸರಕಾರ ರಚನೆಯಾಗಲಿದೆ. ಇದರಲ್ಲಿ ಯಾವುದೇ ಅನುಮಾನವೇ ಬೇಡ ಎಂದು ತಮ್ಮ ಅರ್ಧಶತಮಾನದ ರಾಜಕೀಯ ಜೀವನವನ್ನು ತೆರೆದಿಟ್ಟರು.
ರಾಜಕಾರಣ ಹೀನಾಯ ಸ್ಥಿತಿ ತಲುಪಿದೆ. ಹೀಗಾಗಿ ರಾಜಕೀಯ ಪಕ್ಷಗಳ ಭರವಸೆಯಿಂದ ಜನ ಬೇಸತ್ತಿದ್ದಾರೆ. ಹೊಸದನ್ನು ಬಯಸುತ್ತಿದ್ದಾರೆ. ಜನರೆದುರು ಇದುವರೆಗೂ ಪರ್ಯಾಯ ಇರಲಿಲ್ಲ. ಈ ಬಾರಿ ಚುನಾವಣೆಯಲ್ಲಿ ತೃತೀಯ ರಂಗ ಈ ಸ್ಥಾನ ತುಂಬುವ ಕೆಲಸ ಮಾಡಿದೆ. ಅದರಲ್ಲಿ ಯಶಸ್ವಿಯೂ ಆಗಲಿದೆ ಎಂದು ದೇವೇಗೌಡ ವಿಶ್ವಾಸದಿಂದ ನುಡಿದರು.
ದೇಶದಲ್ಲೀಗ ಕಾಂಗ್ರೆಸ್ ನಿಶ್ಯಕ್ತವಾಗಿದೆ. ಪಕ್ಷಕ್ಕೆ ಬಲ ತುಂಬುವ ವಾತಾವರಣವೇ ನಿರ್ಮಾಣ ಆಗಲಿಲ್ಲ. ಒಂದಡೆ ಲಾಲು ಕೈ ಬಿಟ್ಟರು. ಮುಲಾಮ್ ಸಿಂಗ್ ಯಾದವ್ ದೂರ ಸರಿದರು. ಇವರಲ್ಲದೆ ರಾಂವಿಲಾಸ್ ಪಾಸ್ವಾನ್, ಮಾಯಾವತಿ, ಶಿಬು ಸೊರೇನ್ ಕಾಂಗ್ರೆಸ್ ಜೊತೆಗಿಲ್ಲ. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಕೇರಳ ಹೊರತುಪಡಿಸಿದರೆ ಉಳಿದಂತೆ ಎಲ್ಲೂ ಕಾಂಗ್ರೆಸ್ ಗೆ ಬಹುಮತವಿಲ್ಲ. ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬಲಹೀನಗೊಂಡಿದೆ. ಇವೆಲ್ಲವೂ ತೃತೀಯ ರಂಗಕ್ಕೆ ಪೂರಕ ವಾತಾವರಣ ನಿರ್ಮಿಸಿವೆ ಎಂದು ದೇವೇಗೌಡ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications