ಕಾಂಗ್ರೆಸ್ ಪಂಕ್ಚರ್ ಆದ ಗಾಡಿ: ಅನಂತ್ ಕುಮಾರ್

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ದಿವಾಳಿಯಾಗಲಿದೆ ಎಂದರು. ಕೇಂದ್ರದಲ್ಲಿ ಆಡಳಿತ ನಡೆಸಿದ ಯಪಿಎ ಸರಕಾರ ಎಲ್ಲ ರೀತಿಯಲ್ಲೂ ವೈಫಲ್ಯ ಕಂಡಿದೆ. ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ, ಮೂಲಭೂತ ಸಮಸ್ಯೆಗಳಿಂದ ಗ್ರಾಮೀಣ ಪ್ರದೇಶದ ಜನತೆ ಇಂದು ಕೂಡಾ ಪರಿತಪಿಸಬೇಕಾಗಿದೆ. ಸಂಪೂರ್ಣ ಜನವಿರೋಧಿ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿದ್ದಾರೆ ಎಂದು ಅನಂತಕುಮಾರ್ ಹೇಳಿದರು.
ಎನ್ ಡಿಎ ಸರಕಾರ ಜಾರಿಗೆ ತಂದಿದ್ದ ಪೋಟಾ ಹಿಂತೆಗೆದುಕೊಂಡಿದ್ದರಿಂದ ದೇಶದಲ್ಲಿ ಉಗ್ರರ ಉಪಟಳ ಮತ್ತಷ್ಟು ಹೆಚ್ಚಾಯಿತು. ಅಲ್ಲದೇ ಉಗ್ರರ ಬಗ್ಗೆ ಕಾಂಗ್ರೆಸ್ ಪಕ್ಷ ತಾಳಿರುವ ಮೃದುಧೋರಣೆ ಕಾರಣವಾಗಿದೆ ಎಂದು ಆರೋಪಿಸಿದರು. ಇದಕ್ಕೆ ತಾಜಾ ಉದಾಹರಣೆಯೆಂದರೆ ಸಂಸತ್ ಮೇಲೆ ದಾಳಿ ನಡೆಸಿ ಸುಪ್ರಿಂಕೋರ್ಟ್ ನಿಂದ ಗಲ್ಲು ಶಿಕ್ಷೆಗೆ ಗುರಿಯಾದರೂ ಯುಪಿಎ ಸರಕಾರ ಉಗ್ರ ಅಫ್ಜಲ್ ಗುರುನನ್ನು ರಕ್ಷಿಸಿದ್ದಲ್ಲದೇ, ಜೈಲಿನಲ್ಲಿ ರಾಜ ಮರ್ಯಾದೆ ನೀಡುತ್ತಿರುವುದು ಭಾರತೀಯರಿಗೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ದ್ರೋಹ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ನಂತರ ರಾಷ್ಟ್ರ ರಾಜಕಾರಣದಲ್ಲಿ ಗಮನಾರ್ಹ ಬದಲಾವಣೆ ಕಂಡು ಬರಲಿದೆ. ರಾಜಕೀಯ ದೃವೀಕರಣ ಆಗಲಿದೆ. ಅನ್ಯ ಪಕ್ಷಗಳ ಮುಖಂಡರು ಬಿಜೆಪಿ ಕಡೆಗೆ ತಂಡೋತಂಡವಾಗಿ ಬರಲಿದ್ದಾರೆ ಎಂದರು. ಬಿಜೆಪಿ ನೇತೃತ್ವದ ಎನ್ ಡಿಎ ಅತೀ ಹೆಚ್ಚಿನ ಸ್ಥಾನ ಪಡೆದು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಅನಂತಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications