ತೃತೀಯ ರಂಗ ಆಟಕ್ಕುಂಟು ಲೆಕ್ಕಕ್ಕಿಲ್ಲ : ಆಡ್ವಾಣಿ

ಸೋಮವಾರ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸಲದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಖಚಿತ ಎಂದರು. ಕಳೆದ 50 ವರ್ಷಗಳಿಂದ ದೇಶಕ್ಕೆ ಕಾಂಗ್ರೆಸ್ ಪಕ್ಷ ಎಷ್ಟು ಹಾನಿಯುಂಟಾಗಿದೆ ಎನ್ನುವುದನ್ನು ಹೇಳಬೇಕಾದರೆ ವರ್ಷವೇ ಹಿಡಿಯುತ್ತದೆ ಎಂದು ಲೇವಡಿ ಮಾಡಿದ ಅವರು, ಈ ಚುನಾವಣೆಯಲ್ಲಿ ಮತದಾರರು ನಿರ್ಧಾರ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎನ್ನುವುದನ್ನು ಅರಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅಡ್ವಾಣಿ ವಿಶ್ವಾಸದಿಂದ ಹೇಳಿದರು.
ತೃತೀಯ ರಂಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅಡ್ವಾಣಿ, ಇದೊಂದು ಹಾಸ್ಯಾಸ್ಪದ ರಂಗ. ಇದರಿಂದ ದೇಶಕ್ಕೆ ಯಾವ ಉಪಯೋಗವು ಆಗದು ಎಂದರು. ತೃತೀಯ ರಂಗದಲ್ಲಿರುವ ಎಲ್ಲ ಮುಖಂಡರು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳು. ಇದೇ ವಿಷಯಕ್ಕೆ ಅವರವರಲ್ಲಿ ಹೊಡೆದಾಟ ಆರಂಭವಾಗಲಿದೆ ಎಂದು ಟೀಕಿಸಿದರು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲವೇ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯ ಎಂದು ಅಡ್ವಾಣಿ ಅಭಿಪ್ರಾಯಪಟ್ಟರು.
ಎನ್ ಡಿಎ ನೇತೃತ್ವದ ಸರಕಾರ ಉತ್ತಮ ಆಡಳಿತ ನೀಡಿದರೂ 2004ರಲ್ಲಿ ನಮಗೆ ಸೋಲುಂಟಾಯಿತು. ಅತಿಯಾದ ವಿಶ್ವಾಸ ಭಾರಿ ಆಘಾತವನ್ನುಂಟು ಮಾಡಿತು. ಈಸಲ ಬಿಜೆಪಿಯ ಎಲ್ಲ ನಾಯಕರೂ ಒಗ್ಗಟ್ಟಿನ ಪ್ರಚಾರ ನಡೆಸಿದ್ದೇವೆ. ಕೇಂದ್ರದಲ್ಲಿ ಎನ್ ಡಿಎ ಸರಕಾರ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಅಡ್ವಾಣಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications