ಯಡಿಯೂರಪ್ಪ ಬುಡಬುಡಕಿ ದಾಸ : ಸಿದ್ದು
ಮಾನ್ವಿ, ಏ. 21 : ಮುಖ್ಯಮಂತ್ರಿ ಯಡಿಯೂರಪ್ಪ ಬುಡಬುಡಕಿ ದಾಸ. ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಕೊಂದ ಪಾಪಿ, ಇಂಥವರಿಗೆ ಪಾಠ ಕಲಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯ ನಿಮಿತ್ತ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ ಸಿದ್ದು, ಆಪರೇಷನ್ ಕಮಲದ ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ರೆಡ್ಡಿ ಸಹೋದರರು ರಾಜಕೀಯ ವ್ಯಾಪಾರ ನಡೆಸುತ್ತಿದ್ದಾರೆ ಎಂದರು. ಎರಡು ರೂಪಾಯಿಗೆ ಒಂದು ಕೆಜಿ ಅಕ್ಕಿ, 24 ಘಂಟೆ ವಿದ್ಯುತ್ ನೀಡುವ ಮಾತು ಎಲ್ಲಿಗೆ ಹೋಯಿತು. ಸ್ವಂತ ವರ್ಚಸ್ಸು ಇಲ್ಲದ ಇವರು ವ್ಯಾಪಾರದ ಮೂಲಕ ಪ್ರಭಾವಿಗಳನ್ನೂ ಸೆಳೆದು ಅಧಿಕಾರ ನಡೆಸುತ್ತಿದ್ದಾರೆ. ಸ್ವಂತಿಕೆ ಇಲ್ಲದ ಕೆಲ ರಾಜಕಾರಣಿಗಳು ಬಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುತ್ತಿದ್ದಾರೆ ಎಂದು ಸಿದ್ದು ಅಸಮಾಧಾನ ವ್ಯಕ್ತಪಡಿಸಿದರು.
ಎನ್ ಡಿ ಎ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕೋಮುಗಲಭೆಗಳು ನಡೆದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ನೀಡಿದರೆ, ದೇಶದ ಕೋಮುದಳ್ಳುರಿ ಮುಗಿಲು ಮುಟ್ಟಲಿದೆ. ಎಲ್ ಕೆ ಆಡ್ವಾಣಿ ಪ್ರಧಾನಿಯಾದರೆ ದೇಶ ಒಗ್ಗಟ್ಟಾಗಿ ಉಳಿಯುವುದಿಲ್ಲ ಎಂದು ಸಿದ್ದರಾಮಯ್ಯ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದೇ ಸಭೆಯಲ್ಲಿ ಮಾತನಾಡಿದ ಸಿ ಎಂ ಇಬ್ರಾಹಿಂ, ಮತದಾರರೇ ನೀವು ಬಿಜೆಪಿಯ ನೋಟು ತೆಗೆದುಕೊಳ್ಳಿ ಓಟು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಹಾಕಿ ಎಂದು ಫರ್ಮಾನು ಹೊರಡಿಸಿದರು. ಬಿಜೆಪಿಯವರಲ್ಲಿ ಬಳ್ಳಾರಿಯ ದುಡ್ಡಿದೆ, ಖರ್ಚಿಗೆ ಬೇಕಾದರೆ ತೆಗೆದುಕೊಳ್ಳಿ. ವೋಟು ಮಾತ್ರ ಅವರಿಗೆ ಹಾಕ ಬೇಡಿ. ನಮ್ಮ ಹತ್ತಿರ ದುಡ್ಡಿಲ್ಲ. ಹಾಗಂತ ನಮ್ಮನ್ನು ಮರೆಯ ಬೇಡಿ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications