ಜೆಡಿಎಸ್ಗೆ ಗುಡ್ಬೈ : ಜಯಕುಮಾರ್ ಬಿಜೆಪಿಗೆ ಸೇರ್ಪಡೆ

ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಜಯಕುಮಾರ್, ಬಿಜೆಪಿಯ ತತ್ತ್ವ ಸಿದ್ಧಾಂತಗಳನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದ್ದರು. ಜೆಡಿಎಸ್ ಪಕ್ಷದಲ್ಲಿ ಉನ್ನತ ಸ್ಥಾನ ಕಲ್ಪಿಸಲಾಗಿದ್ದರೂ ಅದರ ಕಾರ್ಯವಿಧಾನದಿಂದ ಬೇಸತ್ತು ಬಿಜೆಪಿ ಸೇರುತ್ತಿರುವುದಾಗಿ ಸೇರ್ಪಡೆಯ ನಂತರ ಹೇಳಿದರು. ಜೆಡಿಎಸ್ ಪಕ್ಷದ ಆಂತರಿಕ ಕಾರ್ಯವೈಖರಿಯಿಂದ ನೊಂದು ಬೆಂದಿರುವ ತಾವು ಯಾವುದೇ ಷರತ್ತಿಲ್ಲದೆ, ಸ್ಥಾನಮಾನದ ಹಂಗಿಲ್ಲದೆ ಬಿಜೆಪಿ ಕೂಡಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಈಗ ಯಾವುದೇ ಸ್ಥಾನಮಾನ ಕೇಳುತ್ತಿಲ್ಲವಾದರೂ ಬಿಜೆಪಿಯಲ್ಲಿ ಮುಂದೆ ಸಾಮಾಜಿಕ ನೆಲೆಯನ್ನು ನೀಡುವ ನಂಬುಗೆಯಿದೆ ಎಂದು ಮನಬಿಚ್ಚಿ ಮಾತನಾಡಿದರು. ನೆಲೆ ನೀಡಿದರೆ ನಮಗೂ ಒಳ್ಳೆಯದು ಮತ್ತು ಪಕ್ಷಕ್ಕೂ ಒಳ್ಳೆಯದು ಎಂದು ಮಾರ್ಮಿಕವಾಗಿ ನುಡಿದರು.
ನಂತರ ಮಾತನಾಡಿದ ಯಡಿಯೂರಪ್ಪನವರು, ಜಯಕುಮಾರ್ ಅವರ ಸೇರ್ಪಡೆ 'ಆಪರೇಷನ್ ಕಮಲ'ದ ಮುಂದುವರಿದ ಭಾಗವಲ್ಲ ಎಂದು ಸ್ಪಷ್ಟಪಡಿಸಿದರು. ಇದು ರಾಜ್ಯದಲ್ಲಿ ರಾಜಕೀಯ ಧೃವೀಕರಣದ ಮುನ್ಸೂಚನೆ ಎಂದು ಹೇಳಿದರು.
ಪ್ರಸ್ತುತ ಚುನಾವಣೆಯಲ್ಲಿ ಮೈಸೂರಿನ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ದೇವೇಗೌಡರನ್ನು ಟಿಟಿಜೆ ಆಗ್ರಹಿಸಿದ್ದರು. ಅದನ್ನು ನೀಡದ ಕಾರಣ ಅವರು ಅಸಮಾಧಾನಗೊಂಡಿದ್ದರು. ಈಗ ರಾಜಕೀಯ ಭವಿಷ್ಯ ಮತ್ತು ಭದ್ರತೆಯ ನೆವ ಮುನ್ನೊಡ್ಡಿಕೊಂಡು ಬಿಜೆಪಿ ಸೇರಿದ್ದಾರೆ.
ಜಯಕುಮಾರ್ ಬಿಜೆಪಿ ಸೇರುತ್ತಿದ್ದ ಸಂದರ್ಭದಲ್ಲಿ ಚಿತ್ರನಟಿ ವನಿತಾವಾಸು ಅವರು ಕೂಡ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications