ಅಡ್ವಾಣಿ ಆರ್ಎಸ್ಎಸ್ ಕೈಗೊಂಬೆ : ಸೋನಿಯಾ

ಮನಮೋಹನ್ ಸಿಂಗ್ ಅಸಮರ್ಥ ಪ್ರಧಾನಮಂತ್ರಿ. ಸರ್ಕಾರದ ಅಷ್ಟೂ ನಿರ್ಧಾರಗಳು ಸೋನಿಯಾ ಗಾಂಧಿ ಅವರೇ ನಿಭಾಯಿಸುತ್ತಾರೆ ಎಂದು ಪದೆಪದೇ ಟೀಕಿಸುತ್ತಿರುವ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಸೋನಿಯಾ ಗಾಂಧಿ ಇಂದು ತಿರುಗೇಟು ನೀಡಿದರು. ಬಿಜೆಪಿಯಲ್ಲಿ ಬಹುದೊಡ್ಡ ನಾಯಕ ಎನಿಸಿಕೊಂಡಿರುವ ಅಡ್ವಾಣಿ, ಒಂದೇ ಒಂದು ವಿಷಯದಲ್ಲಿ ಸ್ವಂತಿಕೆಯನ್ನು ಪ್ರದರ್ಶಿಸಲಿ ಎಂದು ಸವಾಲು ಎಸೆದರು. ಅಡ್ವಾಣಿ ಜೀವನ ಅಂತಿಮ ಗುರಿಯಾಗಿರುವ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಬೇಕಾದರೆ, ಆರ್ಎಸ್ಎಸ್ ಅಡಿಯಾಳಾಗಿ ಕೆಲಸ ಮಾಡಲೆಬೇಕು ಎಂದು ಅವರು ಕಟುಕಿದರು.
ಪಾಕಿಸ್ತಾನದ ಪ್ರವಾಸದ ಸಂದರ್ಭದಲ್ಲಿ ಮೊಹ್ಮದ್ ಅಲಿ ಜಿನ್ನಾ ಅವರನ್ನು ಜಾತ್ಯಾತೀತ ನಾಯಕ ಎಂದು ಪ್ರಶಂಸಿಸಿ ಆರ್ಎಸ್ಎಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಅವರ ಪರಿಸ್ಥಿತಿ ಏನಾಗಿತ್ತು ಎಂದು ಅಡ್ವಾಣಿ ನೆನಪಿಸಿಕೊಂಡರೆ ಒಲಿತು ಎಂದು ಕೆಣಕಿದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ಮೇಲಿಂದ ಮೇಲೆ ಅಸಮರ್ಥ ಪ್ರಧಾನಮಂತ್ರಿ ಎಂದು ಜರಿಯುವುದು ಸರಿಯಲ್ಲ. ಅವರು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿ ಅಲ್ಲ. ಭಾರತ ದೇಶದ ಪ್ರಧಾನಮಂತ್ರಿ ಎನ್ನುವುದನ್ನು ಅಡ್ವಾಣಿ ಮರೆಯಬಾರದು. ಮನಮೋಹನ್ ಸಿಂಗ್ ಅವರಿಗ ಅವಮಾನ ಮಾಡಿದರೆ, ಅದು ದೇಶದ ಜನತೆ ಮಾಡಿದ ಅವಮಾನವಾಗುತ್ತದೆ ಎಂದು ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಪಕ್ಷ ಮೃದುಧೋರಣೆ ತಾಳಿದೆ ಎನ್ನುವ ಟೀಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು, ಎನ್ ಡಿಎ ಸರ್ಕಾರವಿದ್ದಾಗ ಕಂದಹಾರ್ ಅಪಹರಣ ನಡೆಯಿತು. ಆಗ ಭಯೋತ್ಪಾದಕರನ್ನು ಭದ್ರತೆಯೊಂದಿಗೆ ಬಿಟ್ಟು ಬಂದವರು ಯಾರು ಎಂದು ಸೋನಿಯಾ ಪ್ರಶ್ನಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications