10 ಪೊಲೀಸರನ್ನು ಕೊಂದವನಿಗೆ ಬಿಎಸ್ಪಿ ಟಿಕೆಟ್ !
ಪಾಟ್ನಾ, ಮಾ. 26 : ಕಳೆದ ತಿಂಗಳು 10 ಪೋಲೀಸರನ್ನು ಬರ್ಬರವಾಗಿ ಹತ್ಯಗೈದಿದ್ದ ಬಹುಜನ ಸಮಾಜಪಕ್ಷದ ನಾಯಕರೊಬ್ಬರಿಗೆ ಪಕ್ಷದ ಅಧಿನಾಯಕಿ ಮಾಯಾವತಿ ಲೋಕಸಭಾ ಟಿಕೆಟ್ ದಯಾಪಾಲಿಸಿದ್ದಾರೆ. ಬಿಹಾರ್ ನ ಜಾಮುಯಿ ಲೋಕಸಭಾ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸುತ್ತಿರುವ ಅರ್ಜುನ್ ರವಿದಾಸ್ ಎಂಬಾತನೆ ಕೊಲೆಗೈದ ಮಹಾಶಯ.
ಫೆಬ್ರವರಿ 9ನೇ ತಾರೀಖಿನಂದು ಬಿಹಾರ ರಾಜ್ಯದ ನಾವಾಡ ಜಿಲ್ಲೆಯಲ್ಲಿ ಪೋಲಿಸ್ ಠಾಣೆಯೊ೦ದಕ್ಕೆ ನುಗ್ಗಿದ ಅರ್ಜುನ್ ಮತ್ತು ಅವರ ಗುಂಪು 18 ಜನ ಇದ್ದ ಪೋಲೀಸರ ಮೇಲೆ ದಾಳಿ ನಡೆಸಿತ್ತು. ಅದರಲ್ಲಿ ಸ್ಥಳದಲ್ಲೇ 10 ಮಂದಿ ಮೃತಪಟ್ಟಿದ್ದರೆ ಉಳಿದವರು ಗಾಯಗೊಂಡಿದ್ದರು. ಠಾಣೆಯಲ್ಲಿದ್ದ ಪಿಸ್ತೂಲ್ ಮತ್ತು ಕೆಲವೊಂದು ಕಡತಗಳೊ೦ದಿಗೆ ಅರ್ಜುನ್ ಮತ್ತು ಅವರ ಗುಂಪು ಪರಾರಿಯಾಗಿತ್ತು.
ನಿನ್ನೆ ಜಾಮುಯಿ ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸುವ ಅರ್ಜಿ ಪಡೆಯಲು ಬಂದಾಗ ಪೊಲೀಸರು ಅವರನ್ನು ಮತ್ತು ಅವರ ಚೇಲಾಗಳನ್ನು ಬಂಧಿಸಿದ್ದಾರೆ. ಜನಸಾಮಾನ್ಯರ ಜೀವದ ಬೆಲೆ ಅರಿಯದ ಇಂತಹ ಕ್ರಿಮಿನಲ್ ಗಳು ಸಂಸತ್ ಚುನಾವಣೆಗೆ ಸ್ಪರ್ಧಿಸಿರುವುದು ವಿಪರ್ಯಾಸವಲ್ಲದೆ ಮತ್ತೇನು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications