ಶಿವಮೊಗ್ಗದಲ್ಲಿ 111 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ
ಶಿವಮೊಗ್ಗ, ಮಾ. 25 : ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪಂಕಜ್ಕುಮಾರ್ ಪಾಂಡೆ ಅವರು ಸೂಕ್ತ ಕ್ರಮ ಕೈಗೊಂಡಿದ್ದಾರಲ್ಲದೆ, ತಾಲ್ಲೂಕುವಾರು ಅಧಿಕಾರಿಗಳ ತಂಡವನ್ನು ನಿಯೋಜಿಸಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ನಡೆಸುವ ಸಭೆ ಸಮಾರಂಭಗಳ ಸಂದರ್ಭಗಳಲ್ಲಿ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆಯಲ್ಲದೆ, ಅಕ್ರಮವಾಗಿ ಮದ್ಯ ಸರಬರಾಜು, ಸಾಗಾಣೆ, ಸಂಗ್ರಹ ಇತ್ಯಾದಿಗಳ ಬಗ್ಗೆಯೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ, ಸಾರ್ವಜನಿಕ ಸ್ಥಳ, ಸರ್ಕಾರಿ ಕಟ್ಟಡ ಆವರಣಗಳ ಬಳಕೆ, ಧ್ವನಿ ವರ್ಧಕ ಬಳಕೆ ಇತ್ಯಾದಿಗಳ ವಿರುದ್ಧವು ಸಹ ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಚುನಾವಣಾ ನೀತಿ ಜಾರಿ ಆದಾಗಿನಿಂದ ಮಾರ್ಚ್ 22ರ ವರೆಗೆ ಒಟ್ಟು 111 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 94 ಪ್ರಕರಣಗಳು ಅಕ್ರಮ ಮದ್ಯ ಸಾಗಾಣೆ, ಸಂಗ್ರಹಕ್ಕೆ ಸಂಬಂಧಿಸಿದ್ದರೆ, 14 ಪ್ರಕರಣಗಳು ಸರ್ಕಾರದ ಹಾಗೂ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ ಪ್ರಕರಣಗಳು, 3 ಪ್ರಕರಣಗಳು ಸಮಾರಂಭಗಳನ್ನು ಆಯೋಜಿಸಿ, ಪಟಾಕಿ ಹೊಡೆಯುವುದು, ಊಟ ಉಪಹಾರ ಇತ್ಯಾದಿಗಳ ವ್ಯವಸ್ಥೆ ಕುರಿತಂತೆ ದಾಖಲಾಗಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications