ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ
ಬೆಂಗಳೂರು, ಮಾ. 24 : ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಯೋಗದೊಂದಿಗೆ ಮಾರ್ಚ್ 24ರಿಂದ 27ರ ವರೆಗೆ ಮಹಾಲಕ್ಷ್ಮಿ ಲೇಔಟ್ನ ಶ್ರೀನಿವಾಸ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಖಾದಿ ಗ್ರಾಮೋದ್ಯೋಗ ವಸ್ತುಗಳ ಜಿಲ್ಲಾ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದೆ.
ಈ ಅವಧಿಯಲ್ಲಿ ವಸ್ತುಪ್ರದರ್ಶನವು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದ್ದು, ಈ ಪ್ರದರ್ಶನದಲ್ಲಿ ಬೇಸಿಗೆಗೆಂದೇ ತಯಾರಿಸಿದ ಅರಳೆ ಖಾದಿ, ರೇಷ್ಮೆ ಹಾಗೂ ಪಾಲಿಯಸ್ಟರ್ ಬಟ್ಟೆಗಳು, ಯುವ ಜನಾಂಗದ ಮನಸೂರೆಗೊಳ್ಳುವ ಡಿಜೈನರ್ ಉಡುಪುಗಳು, ನೈಸರ್ಗಿಕ ಸೆಣಬಿನ ಉತ್ಪನ್ನಗಳು, ವೈವಿದ್ಯಮಯ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಹಾಗೂ ಚಟ್ನಿ ಪುಡಿಗಳು, ಶುದ್ದ ಜೇನುತುಪ್ಪ, ಹರ್ಬಲ್ ಉತ್ಪನ್ನಗಳು, ಲಾವಂಚ ಉತ್ಪನ್ನಗಳು, ಗ್ರಾಮೀಣ ಕುಂಬಾರಿಕೆಯ ಉತ್ಪನ್ನಗಳು, ಚರ್ಮದ ಪಾದರಕ್ಷೆ-ಮರದ ಕೆತ್ತನೆಯ ವಸ್ತುಗಳು ಹಾಗೂ ಇತರೆ ಅನೇಕ ದೈನಂದಿನ ಉಪಯೋಗದ ವಸ್ತುಗಳು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಲಭ್ಯವಿದೆ.
ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ವಾಹನಗಳಿಗೆ ಉಚಿತ ಪಾರ್ಕಿಂಗ್ ಸೌಲಭ್ಯವಿದೆ. ಈ ವಸ್ತು ಪ್ರದರ್ಶನದಲ್ಲಿ ಪಾಟರಿ ಹಾಗೂ ಇ ಚರಕಗಳ ಪ್ರಾತ್ಯಕ್ಷತೆಯನ್ನು ಸಹ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)