ಸದನದಲ್ಲಿ ಸಂಪಂಗಿ ಪುರಾಣ ಪ್ರತಿಧ್ವನಿ
ಬೆಂಗಳೂರು, ಫೆ. 24 : ಕೆಜಿಎಫ್ ಶಾಸಕ ಸಂಪಂಗಿ ಲಂಚ ಪ್ರಕರಣ ಹಾಗೂ ಪ್ರತಿಪಕ್ಷಗಳ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಸರ್ಕಾರ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷ ಸರ್ಕಾರದ ನೀತಿಯನ್ನು ಖಂಡಿಸಿ ಬಾವಿಗಿಳಿದು ಧರಣಿ ನಡೆಸಿ ನಂತರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸಭಾತ್ಯಾಗ ಮಾಡಿದ ಘಟನೆ ಮಂಗಳವಾರ ವಿಧಾನಸಭೆಯಲ್ಲಿ ನಡೆಯಿತು.
ಇಂದು ಬೆಳಗ್ಗೆ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆಯೇ ವಾಗ್ದಾಳಿ ಆರಂಭಿಸಿದ ಕಾಂಗ್ರೆಸ್ ಪಕ್ಷ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಪ್ರತಿಪಕ್ಷದ ಶಾಸಕರಿಗೆ ಸಂಬಂಧಿಸಿದ ಕ್ಷೇತ್ರದ ಅನುದಾನ ನೀಡುವಲ್ಲಿ ವಿಳಂಬ ಮಾಡತೊಡಗಿದೆ. ಸರ್ಕಾರದ ಈ ತಾರತಮ್ಯ ನೀತಿಯಿಂದಾಗಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಬಿಜೆಪಿ ಶಾಸಕ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟ್ಯಾಂತರ ರುಪಾಯಿಗಳನ್ನು ಬಿಡುಗಡೆ ಮಾಡಿ ಅನ್ಯ ಪಕ್ಷಗಳ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಮೀನಾಮೇಷ ಎಣಿಸುವುದು ಏಕೆ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಉದ್ದೇಶಪೂರ್ವಕವಾಗಿ ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಅನುಸರಿಸತೊಡಗಿದೆ ಎಂದು ಆರೋಪಿಸಿದ ಅವರು, ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಸರ್ಕಾರ ಇದನ್ನು ಉದ್ದೇಶಪೂರ್ವಕವಾಗಿ ಮಾಡತೊಡಗಿದೆ ಎಂದರು. ಖರ್ಗೆ ಮಾತಿಗೆ ಧ್ವನಿಗೂಡಿಸಿದ ದೇವರ ಹಿಪ್ಪರಗಿ ಶಾಸಕ ಎ ಎಸ್ ಪಾಟೀಲ್, ದೇವರಹಿಪ್ಪರಗಿ ಕ್ಷೇತ್ರದಲ್ಲಿ ರಸ್ತೆ ಸ್ಥಿತಿ ಗಂಭೀರವಾಗಿದೆ. ಸರಿಯಾಗಿ ನಡೆದಾಡಿಕೊಂಡು ಹೋಗುವ ಸ್ಥಿತಿಯಲ್ಲೂ ಅಲ್ಲಿನ ರಸ್ತೆಗಳು ಇಲ್ಲ. ರಸ್ತೆ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರೂ ಸರ್ಕಾರ ಕಮಕ್ ಕಿಮಕ್ ಎನ್ನುತ್ತಿಲ್ಲ ಎಂದರೆ ಇದರರ್ಥ ಏನು ಎಂದು ಪಾಟೀಲ್ ಆಕ್ರೋಶ ಭರಿತರಾದರು.
ಇದಕ್ಕೆ ಪ್ರಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸಿ ಎಂ ಉದಾಸಿ, ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸುತ್ತಿಲ್ಲ. ಅನುದಾನ ಬಿಡುಗಡೆಗೆ ಸ್ವಲ್ಪ ಮಟ್ಟಿದೆ ವಿಳಂಬವಾಗಿರಬಹುದು. ಮುಂದಿನ ದಿನಗಳಲ್ಲಿ ಆಯಾ ಕ್ಷೇತ್ರಗಳ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದರು ಭರವಸೆ ನೀಡಿದರು. ಇದಕ್ಕೆ ತೃಪ್ತರಾಗದ ಖರ್ಗೆ ಹಾಗೂ ಎ ಎಸ್ ಪಾಟೀಲ್, ಟಿ ಬಿ ಜಯಚಂದ್ರ ಬಾವಿಗಿಳಿದು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸದನದಿಂದ ಹೊರನಡೆದರು.
ಕೆಜಿಎಫ್ ಶಾಸಕ ಸಂಪಂಗಿ ಲಂಚ ಪುರಾಣ ಮತ್ತೊಮ್ಮೆ ಸದನದಲ್ಲಿ ಪ್ರತಿಧ್ವನಿಸಿತು. ದೇಶದಲ್ಲಿ ಪ್ರಥಮ ಪ್ರಕರಣ ಇದಾಗಿದ್ದು, ಸದನದ ಮರ್ಯಾದೆಯನ್ನು ಬಿಜೆಪಿ ಶಾಸಕರೊಬ್ಬರು ಹರಾಜಿಗಿಟ್ಟಿದ್ದಾರೆ. ಇದು ಎಲ್ಲರೂ ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ಸರ್ವ ಪಕ್ಷಗಳ ಸದನ ಸಮಿತಿ ರಚಿಸಿ ಸಂಪಂಗಿ ಪ್ರಕರಣ ಸದನ ಸಮಿತಿ ಕೈಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)
ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ತಲುಪಲಿ, ಶೋಭಾ











Click it and Unblock the Notifications