ಬಳ್ಳಾರಿ ಬಳಿ ಭೀಕರ ಅಪಘಾತ, ಸ್ಥಳದಲ್ಲೇ 16 ಸಾವು
ಬಳ್ಳಾರಿ, ಫೆ. 19 : ಮದುವೆಯ ಮುಹೂರ್ತಕ್ಕೆ ಹಾಜರಾಗಲು ಬಳ್ಳಾರಿಗೆ ಆಗಮಿಸುತ್ತಿದ್ದ ಕ್ರುಸರ್ ವೇಣಿವೀರಾಪುರದ ಸಮೀಪ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಕಾರಣ 16 ಮಂದಿ ಮೃತಪಟ್ಟ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.
ಮೃತರು ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯ ನಿವಾಸಿಗಳಾದ ಕಾಳಮ್ಮ (40), ಬಸಮ್ಮ (26), ಗಂಗಮ್ಮ (30), ನಿಂಗಪ್ಪ (40), ರುದ್ರಯ್ಯ ಹಿರೇಮಠ್ (50), ಕೆ.ಎಸ್. ಅರಮುಡಿ (45), ವೀರಪ್ಪ (60), ಧನರಾಜ್ (28), ಪಾರಮ್ಮ (50), ವೀರಭದ್ರಯ್ಯ (45), ಶರಣಯ್ಯ (25), ಪ್ರಜ್ವಲ್ (2), ಮಲ್ಲಮ್ಮ (55) ಮತ್ತು ರಾಜೇಶ್ವರಿ (20). ಮಲ್ಲಮ್ಮ ಮತ್ತು ರಾಜೇಶ್ವರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಳಿದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಾಹನದಲ್ಲಿ 21 ಜನ ಪ್ರಯಾಣಿಸುತ್ತಿದ್ದರು. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಇಬ್ಬರು ತೀವ್ರವಾದ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇವರೆಲ್ಲರೂ ಬಳ್ಳಾರಿಯ ಬಂಟ್ಸ್ ಭವನದಲ್ಲಿ ಇಂದು ಏರ್ಪಟ್ಟಿರುವ ಎನ್.ಎಂ. ಗಂಗಯ್ಯಸ್ವಾಮಿ ಎಂಬವರ ಪುತ್ರನ ವಿವಾಹ ಮುಹೂರ್ತದಲ್ಲಿ ಪಾಲ್ಗೊಳ್ಳಲು ನಿನ್ನೆಯ ರಾತ್ರಿ ಊಟದ ನಂತರ ನಿಡಗುಂದಿಯನ್ನು ಬಿಟ್ಟಿದ್ದಾರೆ ಎನ್ನಲಾಗಿದೆ.
ರಸ್ತೆಯ ಬಲ ಬದಿಯಲ್ಲಿ ಇರುವ ಹಳೆಯದಾದ ಒಣಗಿ ನಿಂತಿರುವ ಗಿಡಕ್ಕೆ ವಾಹನ ತೀವ್ರವಾಗಿ ಢಿಕ್ಕಿ ಹೊಡೆದಿದೆ. ಈ ಅಪಘಾತಕ್ಕೆ ಚಾಲಕನ ಅಜಾಗರೂಕತೆ ಮತ್ತು ಬೇಜವಾಬ್ದಾರಿಯ ಚಾಲನೆಯೇ ಕಾರಣ ಎನ್ನಲಾಗಿದೆ. ಚಾಲಕನ ಸ್ಥಿತಿಗತಿ ತಿಳಿದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಸೀಮಂತ್ ಕುಮಾರ್ ಸಿಂಗ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲಿಸಿ ಗಾಯಾಳುಗಳನ್ನು ಆಸ್ಟತ್ರೆಗೆ ದಾಖಲಿಸಿದೆ.
ಘಟನೆ ಕುರಿತು ನಿಡಗುಂದಿಯ ಸಂಬಂಧಿಕರಿಗೆ ಮಾಹಿತಿಯನ್ನು ನೀಡಲಾಗಿದೆ. ಮತ್ತು ಮದುವೆಯ ಬೀಗರಿಗೂ ಕೂಡ ಮಾಹಿತಿ ನೀಡಲಾಗಿದೆ. ಶವಗಳನ್ನು ಆಸ್ಟತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications