ಚುನಾವಣಾಪೂರ್ವ ಸಮೀಕ್ಷೆ ನಡೆಸಬೇಡಿ - ಆಯೋಗ
ನವದೆಹಲಿ ಫೆ 18: ಕಡೆಯ ಹಂತದ ಲೋಕಸಭೆ ಚುನಾವಣೆ ಮುಗಿಯುವವರೆಗೆ ಚುನಾವಣಾಪೂರ್ವ ಅಥವಾ ಮತಗಟ್ಟೆ ಸಮೀಕ್ಷೆ ನಡೆಸಕೂಡದು ಎಂದು ಕೇಂದ್ರ ಚುನಾವಣಾ ಆಯೋಗ ಎಲ್ಲಾ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಈ ಸಂಬಂಧ ಚುನಾವಣಾ ಆಯೋಗದ ಯಾವುದೇ ಮಾರ್ಗಸೂಚಿಗಳಿಗೆ ತಾನು ತಡೆಯಾಜ್ಞೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದ ಬೆನ್ನಲ್ಲೇ ಆಯೋಗ ತನ್ನ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಚುನಾವಣಾ ಪೂರ್ವ ಅಥವಾ ಮತಗಟ್ಟೆ ಸಮೀಕ್ಷೆಗಳು ಚುನಾವಣೆ ಮುಗಿದ ನಂತರ ಮತ್ತು ಮತ ಎಣಿಕೆ ಪ್ರಕ್ರಿಯೆಯ ಮುಂಚೆ ಮಾತ್ರ ಪ್ರಕಟಿಸಬಹುದು ಎಂದು ಚುನಾವಣಾ ಆಯೋಗ ಎಲ್ಲಾ ಇಲೆಕ್ಟ್ರಾನಿಕ್, ಮುದ್ರಣ ಹಾಗೂ ವಿವಿಧ ರೀತಿಯ ಮಾಧ್ಯಮಗಳಿಗೆ ಕಟ್ಟುಪಾಡು ವಿಧಿಸಿದೆ.
ಅಯೋಗದ ಅಕ್ರಮಕ್ಕೆ ಪಕ್ಷಗಳಿಂದ ಸ್ವಾಗತ
ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಮತಗಟ್ಟೆಗಳ ಸಮೀಕ್ಷೆಯ ಪ್ರಸಾರದ ಮೇಲೆ ನಿರ್ಬಂಧ ಹೇರಿರುವ ಚುನಾವಣಾ ಆಯೋಗದ ಕ್ರಮಕ್ಕೆ ಪ್ರಮುಖ ರಾಷ್ಟ್ರೀಯ ಪಕ್ಷಗಳು ಸ್ವಾಗತಿಸಿವೆ.ಅಭಿಪ್ರಾಯ ಸಂಗ್ರಹಗಳ ಸಮೀಕ್ಷೆಯಿಂದ ಮತದಾರರಲ್ಲಿ ಗೊಂದಲವುಂಟಾಗಿ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು . ಆಯೋಗದ ಕ್ರಮ ಸ್ವಾಗತಾರ್ಹ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ವಿವಿಧ ಹಂತಗಳಲ್ಲಿ ಚುನಾವಣೆ ನಡೆಯುವಾಗ, ಮೊದಲ ಹಂತದ ಸಮೀಕ್ಷೆಯ ಮುಂದಿನ ಹಂತದ ಮತದಾನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಮೀಕ್ಷೆ ಪ್ರಸಾರಕ್ಕೆ ತಡೆ ಹೇರಿರುವುದು ಒಳ್ಳೆಯ ಕ್ರಮ ಎಂದು ಬಿಜೆಪಿಯ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟಿದ್ದಾರೆ.
(ಏಜೆನ್ಸೀಸ್)











Click it and Unblock the Notifications