ಗುಲ್ಬರ್ಗಾ, ಮುತಾಲಿಕ್, ಆಂದೋಲನ ಶ್ರೀಗಳು ಬಿಡುಗಡೆ
ಗುಲ್ಬರ್ಗಾ, ಫೆ. 17 : ಪ್ರೇಮಿಗಳ ದಿನಾಚರಣೆಯ (ಫೆ.13) ಮುನ್ನಾ ದಿನ ಬಂಧಿತರಾಗಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲನ ಸಿದ್ಧಲಿಂಗ ಸ್ವಾಮೀಜಿಗಳು ಸೇರಿ ಒಟ್ಟು 14 ಮಂದಿಯನ್ನು ಮಂಗಳವಾರ ಗುಲ್ಬರ್ಗಾ ತಾಲ್ಲೂಕು ದಂಡಾಧಿಕಾರಿಗಳು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಪ್ರೇಮಿಗಳ ದಿನಾಚರಣೆ ವಿರೋಧಿಸಿದ್ದ ಮುತಾಲಿಕ್ ಅವರು ತಾಳಿ ಕಟ್ಟಿ ಇಲ್ಲವೇ ರಾಖಿ ಕಟ್ಟಿ ಎಂಬ ವಿನೂತನ ಆಭಿಯಾನ ನಡೆಸುವುದಾಗಿ ಹೇಳಿದ್ದರು. ಈ ಹೇಳಿಕೆ ದೇಶವ್ಯಾಪಿ ಪ್ರಚಾರ ಪಡೆದುಕೊಂಡು ಭಾರಿ ವಿರೋಧ ಹಾಗೂ ಟೀಕೆಗೆ ಗುರಿಯಾಗಿತ್ತು. ಪ್ರೇಮಿಗಳ ದಿನದಂದು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದ್ದರು.
ರಾಜ್ಯ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಮೋದ್ ಮುತಾಲಿಕ್, ಆಂದೋಲನ ಸಿದ್ದಲಿಂಗ ಸ್ವಾಮೀಜಿಗಳು ಸೇರಿ ಗುಲ್ಬರ್ಗಾ ಗ್ರಾಮೀಣ ಪೊಲೀಸರು ಬಂಧಿಸಿದ್ದ 14 ಮಂದಿಯನ್ನು ಇಂದು ಗುಲ್ಬರ್ಗಾ ತಾಲ್ಲೂಕು ದಂಡಾಧಿಕಾರಿಗಳು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಶ್ರೀರಾಮಸೇನೆಯ ಮುಖಂಡರು, ಕಾರ್ಯಕರ್ತರನ್ನು ಸರ್ಕಾರ ಬಂಧಿಸಿತ್ತು. ಬಿಡುಗಡೆ ನಂತರ ಪ್ರತಿಕ್ರಿಯಿಸಿರುವ ಮುತಾಲಿಕ್, ಯಾವ ಕಾರಣವೂ ಇಲ್ಲದೆ ಅಕ್ರಮವಾಗಿ ಬಂಧಿಸಿರುವ ರಾಜ್ಯ ಸರ್ಕಾರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಬಜರಂಗದಳ, ಶ್ರೀರಾಮಸೇನೆ ಪ್ರೇಮಿಗಳ ಪರ












Click it and Unblock the Notifications