ಎಸ್ಪಿಯಿಂದ ಗಂಗೂಲಿ ಕಣಕ್ಕೆ, ಇದು ಡೋನಾಳ ಅವಾಂತರ
ಕೋಲ್ಕತ್ತಾ, ಫೆ. 17 : ಇತ್ತೀಚೆಗೆ ಬಾಲಿವುಡ್ ನಟ ಸಂಜಯದತ್ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸಮಾಜವಾದಿ ಪಕ್ಷ ಇದೀಗ ಬಂಗಾಲಿ ಮಹಾರಾಜನ ಬೆನ್ನು ಬಿದ್ದಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನ ಕಪ್ತಾನ್ ಆಗಿರುವ ಸೌರವ್ ಗಂಗೂಲಿ ಸಮಾಜವಾದಿ ಪಕ್ಷ ಗಾಳ ಹಾಕಿರುವ ವರದಿ ಬಂದಿದೆ. ಈ ಮಧ್ಯೆ ಸೌರವ್ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧೆಗಳಿಯಲಿದ್ದಾರೆ ಎಂದು ಸೌರವ್ ಪತ್ನಿ ಡೋನಾ ಸ್ಪಷ್ಟಪಡಿಸಿದ್ದಾರೆ.
ಕ್ರಿಕೆಟ್ ನಲ್ಲಿ ದಾದಾ ಎಂದೇ ಕರೆಸಿಕೊಂಡಿರುವ ಸೌರವ್ ಗಂಗೂಲಿ ಅವರನ್ನು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಗಂಗೂಲಿ ಮಾತ್ರ ತುಟಿಬಿಟ್ಟೆಂದಿಲ್ಲ. ಪ್ರಚಾರದಲ್ಲಿರುವ ವ್ಯಕ್ತಿಗಳಿಗೆ ರಾಜಕೀಯ ಪಕ್ಷಗಳು ಪಕ್ಷಕ್ಕೆ ಸೆಳೆಯುತ್ತಿರುವುದು ಹೊಸ ಸಂಗತಿ ಏನಲ್ಲ.
ಲೋಕಸಭೆ ಚುನಾವಣೆಯಲ್ಲಿ ಸೌರವ್ ಸ್ಪರ್ಧಿಸುತ್ತಾರೆ ಎಂದು ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷ ಇಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಗುಟ್ಟಾಗಿರಬೇಕಿದ್ದ ಸುದ್ದಿಯೊಂದನ್ನು ಡೋನಾ ರಟ್ಟು ಮಾಡಿರುವುದು ಸೌರವ್ ಫಜೀತಿಗೆ ಕಾರಣವಾಗಿದೆ. ಅದಕ್ಕೆ ಹೇಳೋದು ಹುಷಾರ್ ಅಂತ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications