ಗಣಿ ಧಣಿಗಳ ಕಣ್ಣೆದುರಿನಲ್ಲಿ 8 ಬಾಲ್ಯವಿವಾಹ!
ರಾಯಚೂರು, ಫೆ. 14 : ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಮತದಾರರನ್ನು ಸೆಳೆಯಬಲ್ಲ ಮೂರು ಪ್ರಭಾವಿ ಮಂತ್ರಿಗಳ ಕಣ್ಣೆದುರಿನಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಅವಘಡವೊಂದು ಶನಿವಾರ ಜರುಗಿಹೋಗಿದೆ. ಬಳ್ಳಾರಿ ಗಣಿ ಧಣಿಗಳಾದ ಜನಾರ್ಧನ ರೆಡ್ಡಿ, ಶ್ರೀರಾಮುಲು, ದೇವದುರ್ಗ ಶಾಸಕ ಶಿವನಗೌಡ ನಾಯಕ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು 8 ಜೋಡಿಗಳ ಬಾಲ್ಯ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.
ಲೋಕಸಭೆ ಚುನಾವಣೆ ಮಗ್ಗುಲಲ್ಲಿರುವಾಗ ಅಭ್ಯುದಯದ ನೆಪವೊಡ್ಡಿ ಬಿಜೆಪಿ ನಾಯಕರು ನೇರವಾಗಿ ಮತಬ್ಯಾಂಕಿಗೆ ಕೈಹಾಕಿದ್ದಾರೆ, ಕಣ್ಮುಂದೆ ಕಾಣುತ್ತಿದ್ದರೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸಿದ್ದಾರೆ. ಇದರಲ್ಲಿ ಧಾರ್ಮಿಕ ಮುಖಂಡರು ಕೂಡ ಭಾಗವಹಿಸಿರುವುದು ಹುಬ್ಬೇರುವಂತೆ ಮಾಡಿದೆ.
ದೇವದುರ್ಗ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಪ್ರಥಮಬಾರಿಗೆ ಸ್ಪರ್ಧಿಸಿ ಗೆದ್ದ ಶಿವನಗೌಡ ನಾಯಕ ಪ್ರಾಯೋಜಿಸಿದ್ದ ಬೃಹತ್ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯೆಂದರೆ ಏನೆಂದು ತಿಳಿಯದ ಬಾಲಕ ಬಾಲಕಿಯರು ಶಾಸ್ತ್ರೋಕ್ತವಾಗಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಒಟ್ಟು 501 ಜೋಡಿಗಳ ವಿವಾಹವನ್ನು ಶಿವರಾಯ ದೇವಸ್ಥಾನ ಕ್ಷೇತ್ರದಲ್ಲಿ ಏರ್ಪಡಿಸಲಾಗಿತ್ತು. 8 ಅಪ್ರಾಪ್ತ ವಯಸ್ಕ ಜೋಡಿಗಳು ಗುಂಪಿನಲ್ಲಿ ಗೋವಿಂದವಾಗಿದ್ದಾರೆ.
ವಿವಾಹ ಬಂಧನಕ್ಕೊಳಗಾದ ಹೆಚ್ಚಿನ ಬಾಲಕ ಬಾಲಕಿಯರಿಗೆ ತಮ್ಮ ವಯಸ್ಸೆಷ್ಟು ಎಂದು ಹೇಳಲು ಕೂಡ ಬರುತ್ತಿರಲಿಲ್ಲ. ಉಳಿದ ಜೋಡಿಗಳಲ್ಲಿ ಹೆಚ್ಚಿನವರು ಬಡವರು. ರಾಯಚೂರು ಜಿಲ್ಲೆ ಕೂಡ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯ ಮಂತ್ರ ಉಚ್ಚರಿಸುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಈ ಘಟನೆಗೆ ಏನು ಹೇಳುತ್ತಾರೆ?
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications