ಗುಲ್ಬರ್ಗಾದಲ್ಲಿ ಪ್ರಮೋದ್ ಮುತಾಲಿಕ್ ಬಂಧನ
ಗುಲ್ಬರ್ಗಾ, ಫೆ. 13 : ಪ್ರೇಮಿಗಳು ನಿರಾಂತಕವಾಗಿ ವ್ಯಾಲೆಂಟೈನ್ ಡೇ ಆಚರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಗುಲ್ಬರ್ಗಾ ಗ್ರಾಮೀಣ ಪೊಲೀಸರು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಸಂಘಟನೆಯ ಗೌರವಾಧ್ಯಕ್ಷ ಆಂದೋಲನ ಶ್ರೀಗಳನ್ನು ಬಂಧಿಸಿದ್ದಾರೆ.
ಶನಿವಾರ ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಗಿಫ್ಟ್ ಸೆಂಟರ್, ಪಬ್ ಗಳು, ಪಾರ್ಕ್ ಗಳು ಸೇರಿದಂತೆ ಪ್ರೇಮಿಗಳು ಸೇರುವ ಸ್ಥಳಗಳಿಗೆ ಬಿಗಿ ಬಂದೋಬಸ್ತ್ ನಿಯೋಜಿಸುವುದರ ಜೊತೆಗೆ ಒಟ್ಟು 139 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರೇಮಿಗಳ ದಿನಾಚರಣೆಗೆ ಭಂಗ ತರುವ ಶಕ್ತಿಗಳಿಗೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಬಿದರಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಸಾರ್ವಜನಿಕ ವಲಯದಿಂದ ವ್ಯಕ್ತವಾದ ಭಾರೀ ಟೀಕೆ ಮತ್ತು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುವುದರಿಂದ ನಾಳೆಯ "ಪ್ರೇಮಿಗಳ ದಿನಾಚರಣೆಗೆ" ಬೆಂಗಳೂರಿನಲ್ಲಿ ಯಾವುದೇ ರೀತಿಯ ತೊಂದರೆ ಪಡಿಸದಿರಲು ಶ್ರೀರಾಮಸೇನೆ ನಿರ್ಧರಿಸಿದೆ. ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ರಾಜ್ಯದ ಇತರ ಭಾಗಗಳಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸಾರಿದ್ದಾರೆ.
ನಮ್ಮಿಂದ ರಾಜ್ಯ ಬಿಜೆಪಿ ಸರಕಾರಕ್ಕೆ ಕೆಟ್ಟ ಹೆಸರು ಬರಬಾರದು ಎನ್ನುವ ಉದ್ದೇಶದಿಂದ ಈ ನಿರ್ಧಾರ ತಗೆದುಕೊಂಡಿದ್ದೇವೆ, ಶ್ರೀರಾಮ ಸೇನೆಯ ಹೆಸರು ಬಳಸಿಕೊಂಡು ಕೆಲವು ಸಮಾಜಘಾತುಕ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಲು ತಯಾರಾಗಿರುವ ವಿಚಾರ ಗಮನಕ್ಕೆ ಬಂದಿದೆ. ಶ್ರೀರಾಮಸೇನೆಯ ಮಹಿಳಾ ಸಂಘಟನೆಯಾದ "ದುರ್ಗಾಸೇನೆ" ಸುಮಾರು 1700 ಸೀರೆಗಳನ್ನು ಈಗಾಗಲೇ ಸಂಗ್ರಹಿಸಿದೆ. ಹಿಂದೂ ಮಹಿಳೆಯರಿಗೆ ಭೂಷಣವಾಗಿರುವ ಸೀರೆ, ಕುಂಕುಮ, ಬಳೆ ಮುಂತಾದ ವಸ್ತುಗಳನ್ನು ನಿಶಾ ಸೂಸಾನ್ ಗೆ ಕಳುಹಿಸಿಕೊಡಲಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಮಧ್ಯೆ ಪತ್ರಕರ್ತೆ ನಿಶಾ ಸೂಸಾನ್ ನೀಡಿದ್ದ ಕರೆಗೆ ಬೆಂಬಲಿಗರು ಕೊರಿಯರ್ ಮೂಲಕ 'ಪಿಂಕ್ ಚಡ್ಡಿ' ಕಳುಹಿಸುತ್ತಿದ್ದು, ಬೆಳಗಾವಿಯಲ್ಲಿರುವ ಮುತಾಲಿಕ್ ಮನೆಗೆ (ಕಛೇರಿ) ರಾಶಿ ರಾಶಿ ಚಡ್ಡಿಗಳು ಬೀಳುತ್ತಿದೆ. ಈ ಮಧ್ಯೆ ಹುಬ್ಬಳ್ಳಿ ಧಾರವಾಡ, ಬೆಳಗಾವಿ, ತುಮಕೂರು, ಮೈಸೂರು ಹಾಗೂ ಮಂಗಳೂರಿನಲ್ಲಿಯೂ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಈ ಪ್ರದೇಶದಲ್ಲಿರುವ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ರಾಧಿಕಾ ಅವರಿಂದ ನಾಗಮಂಡಲ ಸೇವೆ












Click it and Unblock the Notifications