ಸತ್ಯಂ ಹಗರಣ, ರಣರಂಗವಾದ ಆಂಧ್ರ ವಿಧಾನಸಭೆ
ಹೈದರಾಬಾದ್, ಫೆ. 11 : ಲೋಕಸಭೆ ಚುನಾವಣೆಯ ಜೊತೆಗೆ ರಾಜ್ಯವಿಧಾನಸಭೆ ಚುನಾವಣೆಗಳ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಂಧ್ರದಾದ್ಯಂತ ರಾಜಕೀಯ ಪಕ್ಷಗಳಲ್ಲಿ ಭಾರಿ ಚಟುವಟಿಕೆಗಳ ಕಂಡು ಬರತೊಡಗಿವೆ. ಈ ಮಧ್ಯೆ ಸತ್ಯಂ ಹಗರಣವನ್ನು ರಾಜಕೀಯ ಲಾಭಕ್ಕಾಗಿ ದಾಳವಾಗಿಸಿಕೊಂಡಿರುವ ಪ್ರತಿಪಕ್ಷಗಳು ತೀವ್ರ ಹೋರಾಟಕ್ಕಿಳಿದಿದ್ದರಿಂದ ಇಂದು ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಯಿತು.
ಸತ್ಯಂ ಪ್ರಕರಣ ಕಳೆದ ತಿಂಗಳು ಜನವರಿ 7 ರಂದು ಬೆಳಕಿಗೆ ಬಂದಾಗಿನಿಂದ ಆರಂಭವಾಗಿರುವ ಆರೋಪ ಪ್ರತ್ಯಾರೋಪಗಳು ಇಂದಿಗೆ ಮುಗಿಲು ಮುಟ್ಟಿವೆ ಎಂದೇ ಹೇಳಬಹುದು. ಆಡಳಿತ ಪಕ್ಷದ ಮೇಲೆ ಪ್ರತಿಗಳ ಮುಖಂಡರಾದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಎಲ್ಲರೂ ಅಕ್ಷರಶಃ ದಾಳಿ ನಡೆಸತೊಡಗಿದ್ದಾರೆ. ಇತ್ತೀಚೆಗಂತೂ ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಡೆಸುವುದನ್ನು ಬದಿಗಿಟ್ಟಿರುವ ರಾಜಕೀಯ ಪಕ್ಷಗಳ ಮುಖಂಡರು ಸತ್ಯಂ ಹಗರಣವನ್ನು ಮುಂದೆ ಮಾಡಿಕೊಂಡು ರಾಜಕೀಯ ಲಾಭಕ್ಕಾಗಿ ಹರಸಾಹಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ವೈ ಎಸ್ ರಾಜಶೇಖರ್ ರೆಡ್ಡಿ ಪುತ್ರ ವೈಎಸ್ ಜಗಮೋಹನ್ ರೆಡ್ಡಿ ಒಡೆತನ 14 ಕಂಪನಿಗಳಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ. ಹಾಗೂ ಸತ್ಯಂ ಮಾಜಿ ಮುಖ್ಯಸ್ಥ ಗೋಲ್ ಮಾಲ್ ರಾಮಲಿಂಗರಾಜು ಅವರೊಂದಿಗೆ ಮುಖ್ಯಮಂತ್ರಿ ಹಾಗೂ ಅವರ ಪುತ್ರ ವೈಎಸ್ ಜಗಮೋಹನರೆಡ್ಡಿ ಅವರಿಗೆ ಸಂಬಂಧವಿದೆ ಎನ್ನುವುದು ಅಂಧ್ರಪ್ರದೇಶದ ರಾಜಕೀಯ ವಲಯದಲ್ಲಿ ಎದ್ದಿರುವ ಬಿರುಗಾಳಿಗೆ ಕಾರಣವಾಗಿದೆ. ನಿನ್ನೆ, ಮೊನ್ನೆ ಅಂಧ್ರಪ್ರದೇಶದ ವಿಧಾನಸಭೆಯಲ್ಲಿ ನಡೆದ ದಾಂಧಲೆಗಳು, ಕೂಗಾಟ, ಹಾರಾಟಗಳು ನಾಚಿಕೆ ತರಿಸುವಂತಿವೆ.
ಟಿಡಿಪಿ, ಸಿಪಿಐ (ಎಂ), ಸಿಪಿಐ, ತೆಲಂಗಾಣ ರಾಷ್ಟ್ರೀಯ ಸಮಿತಿ ಯ ಶಾಸಕರು ಸರ್ಕಾರದ ವಿರುದ್ಧ ರಣಕಹಳೆಯನ್ನು ಉದಿದ್ದಾರೆ. ಟಿಡಿಪಿಯಂತೂ ಸರ್ಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂದು ವಿಧಾನಸಭೆಯಲ್ಲಿ ಟಿಡಿಪಿ ಶಾಸಕರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ, ಬಾವಿಗಿಳಿದು ಪ್ರತಿಭಟನೆ ಮುಂದಾದರು. ಈ ಸಂದರ್ಭದಲ್ಲಿ ಮೀತಿಮೀರಿದ ಟಿಡಿಪಿ ಶಾಸಕರು ವಿಧಾನಸಭೆ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ರಾಜ್ಯಪಾಲರು, ಟಿಡಿಪಿಯ 55 ಶಾಸಕರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಿದರು. ಇದರಿಂದ ಮತ್ತಷ್ಟು ಕೋಪೋದ್ರಿಕ್ತರಾದ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ. ಇದರಿಂದ ವಿಧಾನಸಭೆ ಅಕ್ಷರಶಃ ರಣರಂಗವಾಗಿ ಪರಿಣಿಸಿತು. ಇತ್ತೀಚೆಗೆ ಸತ್ಯಂ ಹಗರಣವನ್ನು ಸಿಬಿಐಗೆ ವಹಿಸುವಂತೆ ವೈಎಸ್ ರಾಜಶೇಖರ್ ಅವರು ಪ್ರಧಾನಿಗೆ ಮನವಿಪತ್ರ ಕಳಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಸತ್ಯಂ ಪ್ರಕರಣವನ್ನು ಸಿಬಿಐಗೆ ವಹಿಸಿ: ರೆಡ್ಡಿ












Click it and Unblock the Notifications