ಸೀತಾರಾಂ ಬಂಧನ, ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
ಬೆಂಗಳೂರು, ಫೆ. 11 : ಕರಾವಳಿ ಅಲೆ ಪತ್ರಿಕೆ ಸಂಪಾದಕ ಬಿ ವಿ ಸೀತಾರಾಂ ಬಂಧನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸೀತಾರಾಂ ಬಂಧನದಲ್ಲಿ ಪೂರ್ವಾಗ್ರಹಪೀಡಿತ ಮನಸ್ಸುಗಳು ಮಸಲತ್ತು ಮಾಡಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಅಕ್ರಮವಾಗಿ ಸೀತಾರಾಂ ಅವರನ್ನು ಬಂಧನದಲ್ಲಿಟ್ಟಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ರಾಜ್ಯ ಗೃಹ ಇಲಾಖೆಗೆ 10 ಸಾವಿರ ರುಪಾಯಿ ದಂಡ ವಿಧಿಸಿದೆ.
ಸೀತಾರಾಂ ಪತ್ನಿ ರೋಹಿಣಿ ಅವರು ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಎಸ್ಆರ್ ಬನ್ನೂರಮಠ್ ಹಾಗೂ ನ್ಯಾ. ಎಎನ್ ಗೋಪಾಲ ಗೌಡ ಅವರಿದ್ದ ವಿಭಾಗೀಯ ನ್ಯಾಯಾಪೀಠ, ಸರ್ಕಾರ ಸೀತಾರಾಂ ಅವರನ್ನು ನಡೆಸಿಕೊಂಡ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ರಾಜ್ಯ ಗೃಹ ಇಲಾಖೆಯೂ ಪತ್ರಕರ್ತ ಸೀತಾರಾಂ ಬಂಧನಕ್ಕೆ ಸಂಬಂಧಿಸಿದಂತೆ ಯಾವುದೋ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ವರ್ತಿಸಿದೆ. ಈ ಬಂಧನ ಅಕ್ರಮವಾಗಿದ್ದು, ಇದರ ತಪ್ಪಿಗಾಗಿ 10 ಸಾವಿರ ದಂಡ ತೆತ್ತಬೇಕೆಂದು ಆದೇಶಿಸಿದೆ. ದಂಡವನ್ನು ನಾಲ್ಕು ತಿಂಗಳೊಳಗೆ ಪಾವತಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ತಾಕೀತು ಮಾಡಿದೆ.
ಅಲ್ಲದೇ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಮಂಗಳೂರು ಐಜಿಪಿ, ಮಂಗಳೂರು ಜಿಲ್ಲಾ ವರಿಷ್ಠಾಧಿಕಾರಿ, ಮಂಗಳೂರು ಜೈಲು ಅಧಿಕಾರಿಗಳ ವಿರುದ್ದ ವಿಭಾಗೀಯ ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯೊಂದನ್ನು ಪ್ರಕಟಿಸಿದ್ದಕ್ಕಾಗಿ ಸೀತಾರಾಂ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಮಾಧ್ಯಮಗಳ ಮೇಲೆ ನಿಗಾಕ್ಕೆ ಮುಂದಾದ ಸರ್ಕಾರ












Click it and Unblock the Notifications