ನನ್ನ ಕುರ್ಚಿ ಅಲುಗಾಡುತ್ತಿದೆ, ಯಡಿಯೂರಪ್ಪ
ಬೆಂಗಳೂರು, ಫೆ. 9 : ನನ್ನ ಕುರ್ಚಿ ಅಲುಗಾಡುತ್ತಿದೆ....ಹೀಗೆಂದು ಹೇಳಿಕೊಂಡವರು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ. ಅಖಿಲ ಭಾರತ ವೀರಶೈವ ಮಹಾಸಭಾ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಭವನ ಉದ್ಘಾಟಿಸಿದ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತಿರುವುದಾಗಿ ಹೇಳಿಕೊಂಡರು.
ಕುರ್ಚಿ ಅಲುಗಾಡಿಸುತ್ತಿರುವವರು ಯಾರು, ಯಾಕಾಗಿ ? ಪ್ರತಿಪಕ್ಷದವರೋ ಅಥವಾ ಪಕ್ಷದೊಳಗೆ ಈ ಪ್ರಯತ್ನ ನಡೆಯುತ್ತಿದೆಯೇ ಎಂಬುದನ್ನು ಮಾತ್ರ ಯಡಿಯೂರಪ್ಪ ಹೇಳಲಿಲ್ಲ. ನನ್ನ ಕುರ್ಚಿ ಅಲ್ಲಾಡಿಸುವ ಪ್ರಯತ್ನ ಪ್ರತಿದಿನ ನಡೆಯುತ್ತಿದೆ. ಅಂತಹ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ನನಗೆ ಅಧಿಕಾರ ಮುಖ್ಯ ಅಲ್ಲ. ಜನರ ಆಶೀರ್ವಾದಿಂದ ಈ ಅಧಿಕಾರ ಸಿಕ್ಕಿದೆ. ಅಧಿಕಾರ ಇರಲಿ, ಬಿಡಲಿ ಜನರ ಸೇವೆ ಮಾಡುತ್ತೇನೆ ಎಂದರು.
ಮುಂದಿನ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದ ಚಿತ್ರಣ ಬದಲಾಯಿಸುವುದಾಗಿ ಪುನರುಚ್ಚರಿಸಿದ ಅವರು, ವಿದ್ಯುತ್ ಅಭಾವ ನೀಗಿಸುವುದು, ಅಸಮರ್ಪಕ ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆ ಸರ್ಕಾರದ ಆದ್ಯತೆ. ಬಜೆಟ್ ನಲ್ಲಿ ಈ ಅಂಶಗಳಿಗೆ ಹೆಚ್ಚನ ಪ್ರಾಮುಖ್ಯತೆ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಸಿಎಂ ವಾಹನಕ್ಕೂ ಕನ್ನಡ ನಾಮಫಲಕ ಕಡ್ಡಾಯ!












Click it and Unblock the Notifications