ಟಿಟಿಡಿ ಅಧ್ಯಕ್ಷರ ಮೇಲೆ ರಾಮ್ ದೇವ್ ಬಾಂಬ್!
ಹೈದರಾಬಾದ್, ಜ.29:ತಿರುಮಲ ತಿರುಪತಿ ದೇವಸ್ಥಾನದ(ಟಿಟಿಡಿ) ಅಧ್ಯಕ್ಷ ಸ್ಥಾನಕ್ಕೆ ಮದ್ಯದ ವ್ಯಾಪಾರಿಯೊಬ್ಬರನ್ನು ನೇಮಕ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಮುಖ ಯೋಗ ಗುರು ಬಾಬಾ ರಾಮದೇವ್ ಅವರು ಇಂದು ಹೈದರಾಬಾದಿನಲ್ಲಿ ಹೇಳಿದರು.
ಟಿಟಿಡಿ ಅಧ್ಯಕ್ಷ ಆದಿಕೇಶವುಲು ನಾಯ್ಡು ಅವರ ಮೇಲೆ ಬಾಬಾ ರಾಂದೇವ್ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರು. ಹೈದಾರಾಬಾದಿನಲ್ಲಿ ಯೋಗ ತರಗತಿಗಳನ್ನು ನಿರ್ವಹಿಸುತ್ತಿರುವ ಅವರು ಮಾತನಾಡುತ್ತಾ, ಸ್ವಾತಂತ್ರ್ಯ ಬಂದ ಕೂಡಲೆ ಭಾರತದಲ್ಲಿ ಮದ್ಯಪಾನ ಇರಲೇ ಬಾರದು ಎಂದು ಮಹಾತ್ಮಾಗಾಂಧಿ ಭಾವಿಸಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ಸರ್ಕಾರಗಳೇ ಇಂದು ಮದ್ಯ ವನ್ನು ಸರಬರಾಜು ಮಾಡುತ್ತಿದೆ ಎಂದು ನೊಂದು ನುಡಿದರು.
ಧಾರ್ಮಿಕ ಸಂಸ್ಥೆಯಾದ ಟಿಟಿಡಿ ಅಧ್ಯಕ್ಷ ಸ್ಥಾನಕ್ಕೆ ಮದ್ಯದ ವ್ಯಾಪಾರಿ ಆದಿಕೇಶವುಲು ನಾಯ್ಡು ಅವರನ್ನು ಸರಕಾರ ನೇಮಿಸಿರುವುದು ನಾಚಿಕೆಗೇಡು.ದೇಶದ ಪ್ರಜೆಗಳ ಜೀವ ತೆಗೆಯುವಮದ್ಯವನ್ನು ಮಾರುವ ವ್ಯಕ್ತಿಗೆ ದೇವರ ಸಾನಿಧ್ಯದಲ್ಲಿ ಉನ್ನತ ಸ್ಥಾನ ಕಲ್ಪಿಸಿರುವುದು ಶೋಚನೀಯ ಎಂದು ಹೇಳಿದರು.ವಿಜಯ್ ಮಲ್ಯರಂತಹ ಮದ್ಯದ ದೊರೆಗಳು ಟಿಟಿಡಿ ದೇವಸ್ಥಾನಕ್ಕೆ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತಿರುವುದು ದೇವಸ್ಥಾನಕ್ಕೆ ಅಪಮಾನ ಮಾಡಿದಂತೆ ಎಂದರು.
(ಏಜೆನ್ಸೀಸ್)