ಹಾಲು ಉತ್ಪಾದಕರ ಸಂಘಗಳ ಹೆಚ್ಚಳಕ್ಕೆ ಸಲಹೆ
ಬೆಳಗಾವಿ, ಜ. 25 : ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಹಾಲು ಉತ್ಪಾದಕರ ಸಂಘಗಳನ್ನು ಸೃಷ್ಠಿಸಿಕೊಳ್ಳುವ ಮೂಲಕ ಹಾಲು ಉತ್ಪಾದಕರ ಒಕ್ಕೂಟವನ್ನು ಸದೃಢಗೊಳಿಸಬೇಕೆಂದು ರಾಜ್ಯದ ಸಹಕಾರ ಸಚಿವರಾದ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಒಕ್ಕೂಟವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸದೃಢಗೊಳಿಸುವ ಅವಶ್ಯಕತೆಯಿದೆ. ಈ ಸಂಸ್ಥೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ 326 ಹಾಲು ಉತ್ಪಾದನಾ ಸಂಘಗಳು ಒಳಪಟ್ಟಿದ್ದು, ಈ ಸಂಘಗಳನ್ನು ಕನಿಷ್ಠ ಪಕ್ಷ 1000 ಕ್ಕೆ ಏರಿಸುವ ಮೂಲಕ ಸರಕಾರದ ವಿವಿಧ ಯೋಜನೆಗಳ ಲಾಭಪಡೆದು ಒಕ್ಕೂಟವನ್ನು ಸದೃಢಗೊಳಿಸಬೇಕೆಂದು ಸಲಹೆ ನೀಡಿದರು.
ಹಾಲು ಉತ್ಪಾದನಾ ಸಂಘಗಳನ್ನು ಹೆಚ್ಚಿಸುವುದರಿಂದ ಹಾಲಿನ ಸಂಗ್ರಹಣೆ ಹೆಚ್ಚಾಗುವುದು. ಅದರಂತೆ ಸಾರಿಗೆ ವೆಚ್ಚದಲ್ಲಿಯೂ ಕಡಿತಗೊಳಿಸಬೇಕು. ಈ ಸಂಘಗಳು ವಿವಿಧ ಸಾಧನ-ಸಲಕರಣೆಗಳು ಪಡೆದು ಸದೃಢಗೊಳ್ಳಬೇಕೆಂಬ ಉದ್ದೇಶದಿಂದ ಈ ಸಂಘಗಳಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರಕಾರವು ಪ್ರತಿ ಸಂಘಕ್ಕೆ 50 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡುವ ಚಿಂತನೆಯನ್ನು ನಡೆಸಿದೆ. ಈಗಾಗಲೇ ಹಾಲು ಉತ್ಪಾದಕರು ಉತ್ಪಾದಿಸಿದ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿಗಳ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಸರಕಾರ ಜಾರಿಗೊಳಿಸಿದ್ದರಿಂದ ಬೆಳಗಾವಿ ಹಾಲು ಒಕ್ಕೂಟದಲ್ಲಿ 30 ಸಾವಿರ ಲೀಟರ್ ಹೆಚ್ಚುವರಿ ಹಾಲು ಸಂಗ್ರಹಣೆಯಾಗಿರುವುದು ಸಂತಸ ತಂದಿದೆಯೆಂದು ಹೇಳಿದರು.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಆರ್ಥಿಕ ತೊಂದರೆ ಅನುಭವಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಮುಂಬರುವ ಆಯವ್ಯಯದಲ್ಲಿ ಒಕ್ಕೂಟಕ್ಕಾಗಿ 5 ಕೋಟಿ ರೂಪಾಯಿಗಳ ಸಹಾಯಧನ ದೊರಕಿಸಲು ಕ್ರಮಕೈಗೊಳ್ಳಲು ಪಶುಸಂಗೋಪನಾ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಶುಸಂಗೋಪನಾ ಖಾತೆ ಸಚಿವರಾದ ರೇವುನಾಯಕ ಬೆಳಮಗಿ ಅವರು ಅಮೃತ ಯೋಜನೆಯಡಿ 50 ಸಾವಿರ ಮಹಿಳೆಯರಿಗಾಗಿ 10 ಸಾವಿರ ಸಾಲ ಹಾಗೂ 10 ಸಾವಿರ ಸಬ್ಸಿಡಿ ನೀಡುವಂತಹ ಸೌಲಭ್ಯ ಮುಂದುವರೆಸಲಾಗಿದೆ. ಅದರಂತೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಷೇರು ಹಣ ರೂಪದಲ್ಲಿ ಸಹಾಯ ದೊರಕಿಸಲು ಪ್ರಯತ್ನಿಸಲಾಗುವುದೆಂದು ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಉತ್ತರ
ಕರ್ನಾಟಕಕ್ಕೆ
ಭರಪೂರ
ಯೋಜನೆ