ಪೊಲೀಸ್ ಬಲೆಗೆಮಾನವ ಕಳ್ಳಸಾಗಣೆ ಬೃಹತ್ ಜಾಲ
ಬೆಂಗಳೂರು, ಜ.24: ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಣೆ ಬೃಹತ್ ಜಾಲವೊಂದನ್ನು ಬೆಂಗಳೂರು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 7 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ಆರ್.ಟಿ ನಗರದ ಸಯೀದ್ ಇಕ್ಬಾಲ್(28), ಚಿಕ್ಕಪೇಟೆಯ ಸಯೀದ್ ಅಕ್ರಂ (44), ನ್ಯೂ ಭಾರತಿ ನಗರದ ಸಿದ್ದೀಕ್ ಹುಸೇನ್(37), ಆರ್.ಟಿ.ನಗರದ ಇಲಿಯಾಜ್(43), ವಸೀಂ ಪಾಷಾ(24), ಸೈಯದ್ ಗೌಶ್(37), ಮಾರಪ್ಪ ಗಾರ್ಡನ್ ನ ಇಕ್ಬಾಲ್ ಅಹಮದ್(44) ಬಂಧಿತ ಆರೋಪಿಗಳು. ಮಾನವ ಕಳ್ಳ ಸಾಗಣೆಯಲ್ಲಿ ಸುಮಾರು 10 ವರ್ಷಗಳಿಂದ ಈ ಆರೋಪಿಗಳು ತೊಡಗಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 7 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ತನ್ನ ಹೆಸರನ್ನು ಬಹಿರಂಗ ಪಡಿಸದಂತೆ ಪೊಲೀಸರಿಗೆ 10 ಲಕ್ಷ ರು.ಗಳ ಲಂಚದ ಆಮೀಷ ಒಡ್ಡಿದ್ದ ಎಂದು ಕಮೀಷನರ್ ತಿಳಿಸಿದರು. ಹಲವಾರು ರೌಡಿಗಳು, ದುಷ್ಕರ್ಮಿಗಳನ್ನು ನಕಲಿ ಪಾಸ್ ಪೋರ್ಟ್ ಗಳನ್ನು ಪಡೆದಿದ್ದಾರೆಂದು ಬಿದರಿ ಹೇಳಿದರು.
ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಣೆ ದೊಡ್ಡ ಜಾಲವನ್ನು ಬೇಧಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಆರೋಪಿಗಳಿಂದ ನಕಲಿ ಪಾಸ್ ಪೋರ್ಟ್, ವೀಸಾಗಳು, ಅಂತಾರಾಷ್ಟ್ರೀಯ ಕಂಪನಿಗಳ ನಕಲಿ ದಾಖಲೆಗಳು, ಮುದ್ರೆಗಳು, ಒಪ್ಪಂದ ಪತ್ರಗಳು, ಷೇರುಗಳು, ಕಾರು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೂರ್ವ ಏಷ್ಯಾ ರಾಷ್ಟ್ರಗಳಿಗೆ ಇವರು ಅನೇಕ ಮಂದಿಯನ್ನು ಕಳ್ಳಸಾಗಣೆ ಮಾಡಿದ್ದಾರೆ. ಹಲವಾರು ಮಂದಿಗೆ ನಕಲಿ ಪಾಸ್ ಪೋರ್ಟ್ ನೀಡಿ ಅಲ್ಲೇ ನೆಲೆಸುವಂತೆ ಮಾಡಿದ್ದಾರೆ. ರಾಚೇನಹಳ್ಳಿ ಚೆಕ್ ಪಾರ್ಕ್ ನಲ್ಲಿ ಸಂಚು ನಡೆಸುತ್ತಿದ್ದಾಗ ಡಿಸಿಪಿ ಬಸವರಾಜು ಮಾಲಗತ್ತಿ ನೇತೃತ್ವದಲ್ಲಿ ಎಸಿಪಿ ರಾಮಚಂದ್ರಪ್ಪ, ಇನ್ಸೆಪೆಕ್ಟರ್ ರತ್ನಾಕರ ಶೆಟ್ಟಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಬಿದರಿ ವಿವರ ನೀಡಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications