ಘಟಪ್ರಭಾ ನದಿ ಸೇತುವೆ ನಿರ್ಮಾಣಕ್ಕೆ ಚಾಲನೆ
ಬೆಳಗಾವಿ, ಜ 22 : ಹಲವಾರು ವರ್ಷಗಳಿಂದ ಕೆಲಸವಾಗದೇ ನೆನೆಗುದಿಗೆ ಬಿದ್ದಿದ್ದ ಸೇತುವೆ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದು, ಇದರಿಂದ ಗೋಕಾಕ ತಾಲೂಕಿನ ಹತ್ತು ಗ್ರಾಮಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಡಾ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಘಟಪ್ರಭಾ-ಕೊಣ್ಣೂರ ಬಳಿ ಘಟಪ್ರಭಾ ನದಿಗೆ ಸೇತುವೆ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರವು ಕೂಡಾ ಏಕರೀತಿಯ ಸಮಸ್ಯೆಯನ್ನು ನಾಗರಿಕರು ಅನುಭವಿಸುತ್ತಿದ್ದಾರೆ ಎಂದರು.
ಇದರಲ್ಲಿ ಘಟಪ್ರಭಾ-ಕೊಣ್ಣೂರ ರಸ್ತೆಯಲ್ಲಿ ಘಟಪ್ರಭ ನದಿಗೆ ಸೇತುವೆ ನಿರ್ಮಿಸುವ ಕಾರ್ಯವು ಒಂದಾಗಿದೆ. ಮಳೆಗಾಲದಲ್ಲಿ ಘಟಪ್ರಭಾ ನೀರಿನಿಂದ ಈಗ ಇರುವ ಸೇತುವೆ ಮುಳುಗಡೆಯಾದ ಸಂದರ್ಭದಲ್ಲಿ ಕೊಣ್ಣೂರ, ಹಿಡಕಲ್ ಡ್ಯಾಂ, ಗೋಕಾಕ ಫಾಲ್ಸ್, ಮೇಲ್ಮಟ್ಟಿ, ಪಾಶ್ಚಾಪೂರ, ಶಿವಾಪೂರ, ಘೋಡಗೇರಿ ಗ್ರಾಮಸ್ಥರು ಸುಮಾರು 21 ಕಿ.ಮೀ. ಹೆಚ್ಚು ದೂರದವರೆಗೆ ಸಂಚರಿಸಬೇಕಾದಂತಹ ಪರಿಸ್ಥಿತಿ ಉಂಟಾಗಿತ್ತು. ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ಸಂಸದ ಸುರೇಶ ಅಂಗಡಿ ಅವರಿಂದ ಇದನ್ನು ಅರಿತ ತಾವು 11.5 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆಯೆಂದು ಹೇಳಿದರು.
ಅದರಂತೆ ರಾಜ್ಯದಲ್ಲಿ ಹೆದ್ದಾರಿ ಶುಲ್ಕ ನಿಗದಿಪಡಿಸಿ 10 ಸಾವಿರ ಕಿ.ಮೀ. ರಸ್ತೆಯನ್ನು ಸಹ ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಕ್ಕೂ ಹಂತ ಹಂತವಾಗಿ ರಸ್ತೆ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಉತ್ತರ ಕರ್ನಾಟಕ, ಹೈದ್ರಾಬಾದ ಕರ್ನಾಟಕ ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ತಾವು ಹೆಚ್ಚಿನ ಮಹತ್ವ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಹೊಸದಾಗಿ ತೆರಿಗೆ ಇಲ್ಲದೇ ಹತ್ತು ಹಲವು ಕೆಲಸಗಳನ್ನು ಮಾಡಿದ ಸಂತೃಪ್ತಿ ತಮಗಿದೆಯೆಂದು ಹೇಳಿದರು.
ನೆಲ, ಜಲ, ಭಾಷೆ ಪ್ರಶ್ನೆ ಬಂದಾಗ ನಾವು ಯಾವ ಕಾರಣಕ್ಕೂ ಬಗ್ಗುವುದಿಲ್ಲ. ರಾಜ್ಯದಲ್ಲಿ ಭಾಷೆಯ ಹೆಸರಲ್ಲಿ ಕಚ್ಚಾಟ ನಡೆಯಕೊಡದು ಇತ್ತೀಚಿಗೆ ಕೆಲವು ನಡೆದ ಘಟನೆಗಳು ಒಳ್ಳೆಯ ವಾತಾವರಣ ಕೆಡುಸುವಂತಹ ಕಾರ್ಯ, ಹುನ್ನಾರ ನಡೆದಿದ್ದು, ನಾಳೆಯಿಂದ ಕಾನೂನು ಕ್ರಮ ಬಿಗಿಗೊಳಿಸಲಾಗುವುದು. ಶಾಂತಿ ಹಾಗೂ ಸುವ್ಯವಸ್ಥೆ ಕದಡಿಸುವ ಕಾರ್ಯದಲ್ಲಿ ತೊಡಗಿರುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಅವರು ಕಾನೂನನ್ನು ಯಾವುದೇ ಸಂದರ್ಭದಲ್ಲಿ ತಮ್ಮ ಕೈಗೆ ತೆಗೆದುಕೊಳ್ಳಬಾರದೆಂದು ಸೂಚನೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications