ಶರದ್ ಪವಾರ್ ಪಿಎಂ ಆಗಲು ಕಾಂಗ್ರೆಸ್ ನಕಾರ
ನವದೆಹಲಿ, ಜ. 22 : ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ನ ಯುಪಿಎ ಪಕ್ಷಗಳಲ್ಲಿ ರಂಗ ತಾಲೀಮುಗಳು ಈಗಾಗಲೇ ಆರಂಭಗೊಂಡಿವೆ. ಇದರ ಜತೆಗೆ ಪ್ರಾದೇಶಿಕ ಪಕ್ಷಗಳಲ್ಲಿಯೂ ಈ ಪೀಠದ ಕುರಿತಂತೆ ದೊಡ್ಡ ಚರ್ಚೆಗಳು ನಡೆದಿದೆ. ಯುಪಿಎ ಅಂಗ ಪಕ್ಷಗಳಿಂದ ಇದೀಗ ಅಪಸ್ವರ ಕೇಳಿಬಂದಿದ್ದು, ಒಂದು ಕಾಲದ ಕಾಂಗ್ರೆಸ್ ನಾಯಕ ಇಂದಿನ ಎನ್ ಸಿಪಿ ಮುಖಂಡ ಶರದ್ ಪವಾರ್ ಪ್ರಧಾನಮಂತ್ರಿ ಹುದ್ದೆಗೆ ಕಣ್ಣಿಟ್ಟಿರುವ ಸುದ್ದಿ ಇದೀಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ, ಕುತೂಹಲ ಸಂಗತಿಯಾಗಿ ಹೊರಹೊಮ್ಮಿದೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಮಹತ್ವದ ಸಭೆ ಇಂದು ನಡೆಯಲಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಎನ್ ಸಿಪಿ ಪಕ್ಷದ ವಕ್ತಾರ ಡಿ ಪಿ ತ್ರಿಪಾಠಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಎನ್ ಸಿಪಿ ಬಹು ಮುಖ್ಯ ಪಾತ್ರ ವಹಿಸಿದೆ. ಸರ್ಕಾರಕ್ಕೆ ಅನೇಕ ಸಲ ಗಂಡಾಂತರ ಎದುರಾದಾಗ ಸರ್ಕಾರ ಉಳಿಸುವಲ್ಲಿ ಗಣನೀಯ ಸೇವೆ ನೀಡಿದೆ. ಈ ದೆಸೆಯಲ್ಲಿ ಎನ್ ಸಿಪಿ ಮುಖ್ಯಸ್ಥರಾಗಿರುವ ಶರದ್ ಪವಾರ್ ಅವರನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಆದರೆ, ಕಾಂಗ್ರೆಸ್ ಮತ್ತು ಅದರ ಅಂಗ ಪಕ್ಷಗಳು ಎನ್ ಸಿಪಿ ಒತ್ತಾಯವನ್ನು ಸ್ಪಷ್ಟವಾಗಿ ತಳ್ಳಿಹಾಕಿವೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ತ್ರಿಪಾಠಿ, ಐ ಕೆ ಗುಜ್ರಾಲ್ ಹಾಗೂ ಚಂದ್ರಶೇಖರ್ ಅವರಿಗೆ ಕಾಂಗ್ರೆಸ್ ಪಕ್ಷ ಹೊರಗಿನಿಂದ ಬೆಂಬಲ ನೀಡಿ ಅವರನ್ನು ಪ್ರಧಾನಮಂತ್ರಿಯಾನ್ನಾಗಿಸಿತ್ತು. ಅದೇ ಮಾದರಿಯಲ್ಲಿ ಶರದ್ ಪವಾರ್ ಅವರಿಗೂ ಕೂಡ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಭಾರತೀಯ ಜನತಾ ಪಕ್ಷದಲ್ಲೂ ಕೂಡ ಇಂತಹ ಬೆಳವಣಿಗೆಗೆ ರೆಕ್ಕೆಪುಕ್ಕ ದೊರೆತಿತ್ತು. ಮಾಜಿ ಉಪರಾಷ್ಟ್ರಪತಿ ಬೈರೋನ್ ಸಿಂಗ್ ಶೇಖಾವತ್ ಅವರು ನಾನು ಕೂಡ ಪಕ್ಷ ಹಿರಿಯ ಸದಸ್ಯ. ನನಗೂ ಪ್ರಧಾನಿ ಆಗಬೇಕೆಂಬ ಆಸೆ ಇದೆ ಎಂದು ಹೇಳಿಕೆ ನೀಡಿದ್ದರು. ಹಾಗೂ ಭಾರತೀಯ ಉದ್ಯಮಿಗಳು ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಆಗಬೇಕು ಎಂದು ಹೇಳುವ ಮೂಲಕ ಬಿಜೆಪಿ ವಲಯದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದ್ದರು. ಭಾರತೀಯ ಜನತಾ ಪಕ್ಷ ಈಗಾಗಲೇ ಎಲ್ ಕೆ ಅಡ್ವಾಣಿ ಅವರನ್ನು ಮುಂದಿನ ಪ್ರದಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications