ಸುವರ್ಣ ಸೌಧ ಅಡಿಗಲ್ಲಿಗೆ ಪ್ರತಿಪಕ್ಷಗಳ ಕಿಡಿ
ಬೆಳಗಾವಿ, ಜ.22: "ಸುವರ್ಣ ಸೌಧ ನಿರ್ಮಾಣ ಶಂಕು ಸ್ಥಾಪನೆ ಮಾಡುತ್ತಿರುವುದು ಬಿಜೆಪಿ ಕೃಪಾಪೋಷಿತ ಕಾರ್ಯಕ್ರಮ, ಬೆಳಗಾವಿ ಜನತೆಯ ಮುಂದೆ ತಮ್ಮ ಪಕ್ಷದ ಹೆಚ್ಚುಗಾರಿಕೆಯನ್ನು ತೋರಿಸುವ ಹುನ್ನಾರ, ನಾವು ಈ ಕಾರ್ಯಕ್ರಮದಲ್ಲಿ ಖಂಡಿತಾ ಪಾಲ್ಗೊಳ್ಳುವುದಿಲ್ಲ" ಎಂದು ಕಿಡಿಕಾರಿದರು ಜೆಡಿಎಸ್ ನ ನಾಯಕ ವೈಎಸ್ ವಿ ದತ್ತ. ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಅವರ ಕೂಡ ನೆನ್ನೆಯ ಈ ಬಗ್ಗೆ ತಗಾದೆ ತೆಗೆದಿದ್ದರು. ಆದರೆ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆಡಳಿತ ಪಕ್ಷದ ಕಾರ್ಯಕರ್ತರು ಬಿರುಸಿನಿಂದ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಸುವರ್ಣ ಸೌಧ ನಿರ್ಮಾಣ ಈ ಭಾಗದ ಜನರ ಬಹು ದಿನದ ಕನಸು. ಅದಕ್ಕೆ ನಾಂದಿ ಹಾಡಿದ್ದು ಕುಮಾರಸ್ವಾಮಿ ಅವರು, ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವುದು. ಅಧಿವೇಶನ ನಡೆಸುವುದು, ಸುವರ್ಣ ಸೌಧ ನಿರ್ಮಾಣ ಎಲ್ಲವೂ ಅವರು ಅಧಿಕಾರದಲ್ಲಿದ್ದಾಗ ಹಾಕಿಕೊಂಡ ಯೋಜನೆಯಾಗಿದೆ. ಇಷ್ಟಾದರೂ ಯಡಿಯೂರಪ್ಪ ಅವರ ಸರ್ಕಾರ ಕನಿಷ್ಠ ಸೌಜನ್ಯವಿಲ್ಲದಂತೆ ವರ್ತಿಸುತ್ತಿದೆ. ಸುವರ್ಣ ಸೌಧ ಶಂಕುಸ್ಥಾಪನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿ ಅವರ ಹೆಸರನ್ನು ಹಾಕದೆ ಬಹು ದೊಡ್ಡ ಪ್ರಮಾದ ಮಾಡಿದೆ. ಇದು ಅವರ ಖಾಸಗಿ ಕಾರ್ಯಕ್ರಮವಲ್ಲ ಎಂದು ದತ್ತ ಲೇವಡಿ ಮಾಡಿದರು.
ಕಾಂಗ್ರೆಸ್ ಗುಡುಗು: ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಕೂಡ ನಾಪತ್ತೆ ಆಗಿರುವುದನ್ನು ಕಂಡು ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೆಂಡ ಕಾರಿದ್ದಾರೆ. ಪ್ರತಿಪಕ್ಷಗಳನ್ನು ಗಣನೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸಭೆ ಸಮಾರಂಭ ನಡೆಸಲು ಹೊರಟಿರುವುದು ಪ್ರಮಾದ ಇದಕ್ಕೆ ಬೆಳಗಾವಿಯ ಪ್ರಜ್ಞಾವಂತ ಜನರಿಂದಲೇ ತಕ್ಕ ಉತ್ತರ ದೊರೆಯಲಿದೆ ಎಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬೆಳಗಾವಿಲಿ ಸುವರ್ಣ ಸೌಧ ತಲೆಯೆತ್ತಲಿದೆ!!!












Click it and Unblock the Notifications