ಕೊಲ್ಲಾಪುರದಲ್ಲಿ ಮತ್ತೆ ಎರಡು ಬಸ್ ಮೇಲೆ ಹಲ್ಲೆ
ಬೆಳಗಾವಿ, ಜ. 20 : ಶುಕ್ರವಾರ ಲಾತೂರಿನಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಸನ್ನು ಭಸ್ಮ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪುಂಡಾಟಿಕೆ ನಡೆಸಿದ್ದ ಶಿವ ಸೈನಿಕರು ಇಂದು ಕೂಡಾ ತಮ್ಮ ಕೃತ್ಯವನ್ನು ಮುಂದುವರಿಸಿದ್ದಾರೆ. ಬೆಳಗಾವಿ ಡಿಪೋಗೆ ಸೇರಿದ ರಾಜ್ಯ ರಸ್ತೆ ಸಾರಿಗೆಯ ಎರಡು ಬಸ್ ಗಳ ಮೇಲೆ ದಾಳಿ ಮಾಡಿದ್ದಾರೆ. ಕೋಲ್ಲಾಪುರದ ಕಾವ್ಲಾ ಬಳಿ ಬಸ್ ನಿಲ್ಲಿಸಿ ಚಾಲಕ ಹಾಗೂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕಳೆದ ಶುಕ್ರವಾರ ಮಹಾರಾಷ್ಟ್ರದ ಲಾತೂರಿನಲ್ಲಿ ಶಿವಸೇನೆ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಬಸ್ಸನ್ನು ಭಸ್ಮ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ವಿ ಎಸ್ ಆಚಾರ್ಯ ಮಹಾರಾಷ್ಟ್ರ ಗೃಹ ಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕರ್ನಾಟಕದ ಬಸ್ ಗಳಿಗೆ ಸೂಕ್ತ ಭದ್ರತೆ ನೀಡಿ ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಬಸ್ ಗಳಿಗೆ ಸೂಕ್ತ ಭದ್ರತೆ ನೀಡಲಾಗುವುದು ಎನ್ನುವ ಭರವಸೆ ನೀಡಿದ್ದರು. ಮಹಾರಾಷ್ಟ್ರ ಸರ್ಕಾರ ಈ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಕೊಲ್ಲಾಪುರ ಕಾವ್ಲಾ ಬಳಿ ಮತ್ತೆ ರಾಜ್ಯ ರಸ್ತೆ ಸಾರಿಗೆ ಬಸ್ ಮೇಲಿನ ದಾಳಿಗಳು ನಡೆಯತೊಡಗಿವೆ.
ಬೆಳಗಾವಿ ಪಾಲಿಕೆ ಮೇಲಿನ ಭಗವಾಧ್ವಜ ತೆಗೆಯಲು ಕರವೇ ಕಾರ್ಯಕರ್ತರ ಯತ್ನಿಸಿದ್ದರು. ಹಾಗೂ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ ಕಾರ್ಯಕ್ರಮವನ್ನು ಎಂಇಎಸ್ ಹಮ್ಮಿಕೊಂಡಿತ್ತು. ಅದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರಲಿಲ್ಲ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಪ್ರತಿಪಕ್ಷದ ನಾಯಕ ರಾಮದಾಸ್ ಕದಂ ಕರ್ನಾಟಕ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಾಲಿಕೆ ಮೇಲಿನ ಭಗವಾ ಧ್ವಜ ತೆಗೆಯಲು ಯತ್ನಿಸಿದರೆ ಕೈ ಕಟ್ ಮಾಡತ್ತೇವೆ ಎಂದು ದುರಂಹಕಾರದ ಹೇಳಿಕೆಯನ್ನು ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮಹಾರಾಷ್ಟ್ರಕ್ಕೆ ಸೇರಿದ ಎರಡು ಟೆಂಪೋ ಭಸ್ಮ
ಲಾತೂರ್ ನಲ್ಲಿ ರಾಜ್ಯದ ಬಸ್ ಗೆ ಬೆಂಕಿ












Click it and Unblock the Notifications