ಹುಬ್ಬಳ್ಳಿ ಸ್ಫೋಟ : 9 ಮಂದಿ ಬಂಧನ
ಬಾಗಲಕೋಟೆ, ಜ. 12 : ರಾಜ್ಯವನ್ನೇ ತಲ್ಲಣಸಿದ್ದ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ಪ್ರಕರಣ, ಧಾರವಾಡ ಸಮೀಪದ ವೆಂಕಟಾಪುರದ ಬಳಿ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್ ಗಳನ್ನು ಹುದುಗಿಸಿಟ್ಟದ್ದ ಪ್ರಕರಣ ಸೇರಿ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ದೀಪಾವಳಿ ದಿನ ಅಕ್ಟೋಬರ್ 29 ರಂದು ನಗರದ ವ್ಯಾಪಾರಿ ಕಿರಣ ಕಮಟಗಿ ಎಂಬುವವರ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ನಗರದ ಪೊಲೀಸರು, ಹುಬ್ಬಳ್ಳಿ ಬಾಂಬ್ ಸ್ಫೋಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದ ದುಷ್ಕರ್ಮಿಗಳ ಜಾಲವನ್ನು ಭೇದಿಸಿದ್ದಾರೆ. ಬಂಧಿತರಿಂದ 11.08 ಲಕ್ಷ ನಗದು, ಚಿನ್ನ, ಬೆಳ್ಳಿ, ಮೋಟಾರ್ ಸೈಕಲ್, ಮಾರಾಕಾಸ್ತ್ರಗಳು, ಗನ್ ಪೌಡರ್, ಆರೋಪಿ ಜಂಬಗಿಯ ಹುಬ್ಬಳ್ಳಿಯ ಮನೆಯಲ್ಲಿ ಸಜೀವ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀಳಗಿಯ ನಾಗರಾಜ ಜಂಬಗಿ, ಲಿಂಗರಾಜ ಜಾಲಗಾರ, ಬಾಗಲಕೋಟದ ರಮೇಶ್ ಪವಾರ್, ದೀಪಕ್ ಗೋವಿಂದಕರ್, ಬಸವರಾಜ ಡಿಗ್ಗಿ, ಗೋಕಾಕದ ಬಸವರಾಜ ರೂಗಿ, ಇಂಡಿ ತಾಲ್ಲೂಕಿನ ಹನುಮಂತ ಸೈನಸಾಕಳಿ, ಚೆನ್ನಬಸಪ್ಪ ಹುಣಸಗಿ ಬಂಧಿತ ಆರೋಪಿಗಳಾಗಿದ್ದಾರೆ. ಭಾಗಲಕೋಟ ದಲ್ಲಿ ದಂಪತಿ ಕೊಲೆ, ವ್ಯಾಪಾರಿ ಕಿರಣ್ ಕಮಟಗಿ ಸೇರಿ ಅನೇಕ ಪ್ರಕರಣಗಳು ಇವರ ಮೇಲಿವೆ.
ಅಲ್ಲದೇ ಶಾಸಕರಾದ ಸತೀಸ್ ಜಾರಕಿಹೊಳಿ, ವೀರಣ್ಣ ಚರಂತಿಮಠ, ಮಾಜಿ ಶಾಸಕ ಪಿ ಎಚ್ ಪೂಜಾರ, ಉದ್ಯಮಿ ರಾಧೇಶ್ಯಾಮ ಚಂಡಕ, ಆಭರಣ ವ್ಯಾಪಾರಿಗಳಾದ ದಿನೇಶ್ ಬಾರ್ಶಿ, ರವಿ ಕುರ್ಡೇಕರ್, ಹುಬ್ಬಳ್ಳಿಯ ಹರಿಪ್ರಿಯಾ ಹೋಟೇಲ್ ಮಾಲೀಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಉತ್ತರ ವಲಯದ ಡಿಜಿಪಿ ರಾಘವೇಂದ್ರ ಔರಾದಕರ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications