ಬೆಂಗಳೂರು ಟೆಕ್ಕಿಗಳಿಗೆ ಯುದ್ಧ ಕಲೆ ತರಬೇತಿ
ಬೆಂಗಳೂರು, ಜ. 12 : ಸಿಲಿಕಾನ್ ಸಿಟಿ ಬೆಂಗಳೂರು ಮೇಲೆ ಉಗ್ರರ ದಾಳಿ ಮಾಡುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಭಯೋತ್ಪಾದಕರು ಯಾವ ಸಮಯದಲ್ಲಿ ಬೇಕಾದರೂ ದಾಳಿ ನಡೆಸಬಹುದು. ಇದಕ್ಕೆ ಸಂಬಂಧಿಸಿದಂತೆ ನಗರದಲ್ಲಿರುವ ಪ್ರಮುಖ ಐಟಿ ಕಂಪನಿಗಳು ಹೆಚ್ಚಿನ ಭದ್ರತೆ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಜೊತೆಗೆ ಖಾಸಗಿ ಭದ್ರತೆಯನ್ನು ಸುಭದ್ರಗೊಳಿಸಿಕೊಂಡಿವೆ.
ಇದರ ಬೆನ್ನಲ್ಲೇ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಐಟಿ ಕಂಪನಿಯ ಮುಖ್ಯಸ್ಥರು, ತಮ್ಮ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸ್ವಯಂ ರಕ್ಷಣೆಯ ಯುದ್ಧ ಕಲೆಯ ತರಬೇತಿಯನ್ನು ನೀಡತೊಡಗಿವೆ. ಭಯೋತ್ಪಾದಕರಿಂದ ಅಪಹರಣ, ಕಂಪನಿಯಲ್ಲಿ ಏಕಾಏಕಿ ದಾಳಿ ನಡೆದಾಗ ಟೆಕ್ಕಿಗಳು ಇದನ್ನು ಸಮರ್ಥವಾಗಿ ಎದುರಿಸಲಿ ಎನ್ನುವ ಉದ್ದೇಶದಿಂದ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಮರ ಕಲೆ (ಕ್ರಾವ್ ಮಗಾ) ಇಸ್ರೇಲ್ ನಿಂದ ಪರಿಣಿತ ಕೋಚ್ ಗಳನ್ನು ಕರೆಸಿ ಅವರ ಮೂಲಕ ಈ ತರಬೇತಿ ನೀಡಲಾಗುತ್ತಿದ್ದು, ಟೆಕ್ಕಿಗಳು ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಈ ತರಬೇತಿಯ ಏಕೈಕ ಉದ್ದೇಶ ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಆಶೀಶ್ ಪುರಿ ಅಭಿಪ್ರಾಯಪಡುತ್ತಾರೆ.
20 ಟೆಕ್ಕಿಗಳ ತಂಡ ಈ ಕ್ರಾವ್ ಮಗಾ ತರಬೇತಿಯನ್ನು ಪಡೆಯುತ್ತಿದೆ. ಶಸ್ತಾಸ್ತ್ರ ರಹಿತ ಯುದ್ಧ ಕಲೆಯಲ್ಲಿ ಇಸ್ರೇಲಿಗಳು ಜಗತ್ತಿನಲ್ಲಿಯೇ ಪರಿಣಿತಿ ಹೊಂದಿದವರಾಗಿದ್ದಾರೆ. ಗಡಿಯಲ್ಲಿ ನಿಂತು ವಿರೋಧಿ ಸೈನ್ಯದ ವಿರುದ್ಧ ಹೋರಾಡುವುದು ಸಾಧ್ಯವಾಗದಿದ್ದರೂ, ಸ್ವಯಂ ರಕ್ಷಣೆ ಮಾಡಿಕೊಳ್ಳುವ ತಾಕತ್ತಾದರೂ ಇರಲಿ ಎಂದು ತರಬೇತಿ ಆಯೋಜಿಸಲಾಗಿದೆ ಎಂದು ಪುರಿ ಹೇಳಿದರು.
ಭಯೋತ್ಪಾದಕರ ದಾಳಿ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಪಡೆ ಹಾಗೂ ಪೊಲೀಸರು ಬಂದು ಹೋರಾಟ ಮಾಡಬೇಕೆಂದರೆ ಸಾಧ್ಯವಾಗದು. ಆದ್ದರಿಂದ ಪ್ರತಿಯೊಬ್ಬರು ಇಂತಹ ಸಮರಕಲೆಯ ತರಬೇತಿ ಪಡೆಯುವುದು ಅವಶ್ಯ ಎಂದು ಕ್ರಾವ್ ಮಗಾ (ಸಮರಕಲೆ) ತರಬೇತಿದಾರ ಜೆ ಫ್ರಾಂಕ್ ಅವರ ಸಲಹೆಯಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ಸತ್ಯಂ
ಉದ್ಯೋಗಿಗಳ
ಸೆಳೆಯುವುದಿಲ್ಲ:ಇನ್ಫಿ