ಸತ್ಯಂ ಸಿಎಫ್ಒ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನ ?
ಹೈದರಾಬಾದ್, ಜ. 9 : ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎನ್ನುವ ಗಾದೆಯ ಹಾಗೆ ಸತ್ಯಂ ಕಂಪನಿಯ ಬಹುಕೋಟಿ ಹಗರಣದಲ್ಲಿ ರಾಮಲಿಂಗರಾಜು ಅವರೊಂದಿಗೆ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸತ್ಯಂ ಹಣಕಾಸು ವಿಭಾಗದ ಮುಖ್ಯಸ್ಥ ಶ್ರೀನಿವಾಸ ವದ್ಲಾಮಣಿ ಆತ್ಮಹತ್ಯೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಮೂಲಗಳು ಹೇಳಿವೆ.
ಕಳೆದ ಬುಧವಾರ ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಅವ್ಯವಹಾರದ ದಾಖಲೆ ಹಾಗೂ ರಾಜೀನಾಮೆ ಪತ್ರವನ್ನು ಸತ್ಯಂ ಆಡಳಿತ ಮಂಡಳಿ ಹಾಗೂ ಸೆಬಿಗೆ ಕಳುಹಿಸಿದ್ದರು. ಅಂದಿನಿಂದಲೇ ಶ್ರೀನಿವಾಸ್ ವದ್ಲಾಮಣಿ ನಾಪತ್ತೆಯಾಗಿದ್ದರು. ರಾಮಲಿಂಗರಾಜು ಅವ್ಯವಹಾರದಲ್ಲಿ ಸಂಪೂರ್ಣ ಭಾಗಿಯಾಗಿರುವ ಶ್ರೀನಿವಾಸ ಅತ್ಮಹತ್ಯೆ ಯತ್ನಿಸಿದ್ದಾರೆ ಎನ್ನಲಾಗಿದೆ.
ರಾಜು ರಾಜೀನಾಮೆ ನೀಡಿದ ನಂತರ ವದ್ಲಾಮಣಿ ಕೂಡ ತಮ್ಮ ರಾಜೀನಾಮೆ ಪತ್ರವನ್ನು ಸತ್ಯಂ ಆಡಳಿತ ಮಂಡಳಿಗೆ ಕಳುಹಿಸಿದ್ದಾರೆ. ಆದರೆ ಆಡಳಿತ ಮಂಡಳಿ ವದ್ಲಾಮಣಿ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿಲ್ಲ. ಶನಿವಾರ ನಡೆಯುವ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸತ್ಯಂ ಕಂಪನಿ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮ್ ಮೈನಂಪತಿ ಗುರುವಾರ ಸತ್ಯಂ ಕಂಪನಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.
ರಾಜು ಬಂಧನಕ್ಕೆ ಜಾಲ
ಭಾರತೀಯ ಎನ್ರಾನ್ ಹಗರಣ ಎಂದೇ ಕಾರ್ಪೋರೇಟ್ ವಲಯದಲ್ಲಿ ಕುಖ್ಯಾತಿ ಪಡೆದಿರುವ ಸತ್ಯಂ ಹಗರಣದ ಪ್ರಮುಖ ಆರೋಪಿ ರಾಮಲಿಂಗರಾಜು ಅವರ ಬಂಧನಕ್ಕೆ ಹೈದರಾಬಾದ್ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅವರ ಬಂಧನಕ್ಕೆ ತೀವ್ರ ಒತ್ತಡ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ರಾಮಲಿಂಗರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರ ಪತ್ತೆಗೆ ಹುಡಕಾಟ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ರಾಮಲಿಂಗ ರಾಜು ಬಂಧನಕ್ಕೆ ಹೆಚ್ಚಿದ ಒತ್ತಡ












Click it and Unblock the Notifications