ಗುಲ್ಬರ್ಗಾದ ಬುದ್ಧ ವಿಹಾರ ಲೋಕಾರ್ಪಣೆ
ಸರಿ ಸುಮಾರು 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ ತೆಲೆ ಎತ್ತಿರುವ ಬುದ್ಧ ವಿಹಾರ ದೇಶ, ವಿದೇಶಿಗರ ಕಣ್ಮನ ಸೆಳೆಯುತ್ತಿದೆ. ಮಂದಿರ ನಿರ್ಮಾಣದಲ್ಲಿ ಅಜಂತಾ, ಎಲ್ಲೋರಾ ಮಾದರಿಯ ಕಲೆ ಅಳವಡಿಸಿರುವುದು ವಿಶೇಷ. ರಾಮನಗರ ಜಿಲ್ಲೆ ಬಿಡದಿಯ ಅಶೋಕ ಗುಡಿಕಾರ, ಆರು ಅಡಿ ಎತ್ತರದ ಬುದ್ಧನ ವಿಗ್ರಹ ನಿರ್ಮಿಸಿ ಕಲಾ ಕೌಶಲ್ಯ ಪ್ರದರ್ಶಿಸಿದ್ದಾರೆ. ವಿಹಾರದ ನೆಲೆಮನೆ ಆವರಣದಲ್ಲಿ ಸುಮಾರು 2 ಸಾವಿರ ಭಕ್ತರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಕುಳಿತ ಬುದ್ಧನ ಮೂರ್ತಿ ನೋಡಲು ಬಲು ಆಕರ್ಷಣೀಯವಾಗಿದೆ. 400 ಪಂಚ ಲೋಹದಿಂದ ಈ ಮೂರ್ತಿಯನ್ನು ಸಿದ್ದಪಡಿಸಲಾಗಿದೆ. ಅದಕ್ಕೆ ಚಿನ್ನದ ಲೇಪನ ಮಾಡಲಾಗಿದೆ.
ವಿಹಾರದ ಹೊರಭಾಗದಲ್ಲಿರುವ ಸ್ತೂಪಗಳನ್ನು ಇಟಾಲಿಯನ್ ಮಾರ್ಬಲ್ ನಿಂದ ತಯಾರಿಸಲಾಗಿದೆ. ಅಶೋಕನ ಕಾಲದ ಮಾದರಿಯಂತೆ ನಾಲ್ಕು ದಿಕ್ಕುಗಳಲ್ಲಿ ಪಿಲ್ಲರ್ ಹಾಕಲಾಗಿದೆ. ರೋಸ್ ವುಡ್ ದ್ವಾರ ಅಳವಡಿಸಲಾಗಿದೆ. ಒಟ್ಟು ಆರು ದ್ವಾರಗಳ ಪೈಕಿ ಮೂರನ್ನು ಟೀಕ್ ವುಡ್ ನಿಂದ ನಿರ್ಮಿಸಲಾಗಿದೆ. ಮೈಸೂರು ಅರಮನೆ ಕಲಾವಿದ ಕುಟುಂಬದ ಕೈಸರ್ ಅಲಿ ಸಾಂಪ್ರದಾಯಿಕ ಮಾದರಿಯಲ್ಲಿ ಈ ದ್ವಾರ ನಿರ್ಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯಪಾಲ ರಾಮೇಶ್ವಪ ಠಾಕೂರ್, ಸಿದ್ದಾರ್ಥ ವಿಹಾರ ಟ್ರಸ್ಟ್ ನ ಧರ್ಮದರ್ಶಿ ಹಾಗೂ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ. ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಸಚಿವರಾದ ಲಕ್ಷ್ಮಣ ಸವದಿ, ರೇವೂ ನಾಯಕ ಬೆಳಮಗಿ, ಡಿ ಕೆ ಶಿವಕುಮಾರ್ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)