ಮುಷ್ಕರ : ಸಹಕರಿಸಲು ಶಿವಮೊಗ್ಗ ಡಿಸಿ ಮನವಿ
ಶಿವಮೊಗ್ಗ, ಜ.7 : ಲಾರಿ ಮುಷ್ಕರ ಸಂದರ್ಭದಲ್ಲಿ ಹಣ್ಣು, ಹಾಲು, ತರಕಾರಿ, ಔಷಧಿ, ಪೆಟ್ರೋಲ್, ಡೀಸಲ್ ಇತ್ಯಾದಿ ಅಗತ್ಯ ವಸ್ತುಗಳ ಸಾಗಾಣಿಕೆಗೆ ತೊಂದರೆಯಾಗದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ಅವರು ನಿನ್ನೆ ಲಾರಿ ಮಾಲೀಕ ರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲಾರಿ ಮುಷ್ಕರದಿಂದಾಗಿ ಉಲ್ಬಣಿಸಬಹುದಾದ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿ ಗಳ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಮುಂದಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಷ್ಕರ ದೀರ್ಘಕಾಲ ಮುಂದುವರಿದರೆ ಅಗತ್ಯ ವಸ್ತುಗಳ ಮೇಲೆ ಬಹಳಷ್ಟು ಪರಿಣಾಮ ಬೀರುವುದರಿಂದ ಸಾರ್ವಜನಿಕರಿಗೆ ತೀವ್ರ ರೀತಿಯ ತೊಂದರೆಗಳಾಗಲಿವೆ. ಇದಕ್ಕೆ ಅವಕಾಶಕೊಡದೆ ಸಹಕರಿಸಬೇಕೆಂದು ಹೇಳಿದ ಜಿಲ್ಲಾಧಿಕಾರಿಗಳು ಮುಷ್ಕರ ಸಂದರ್ಭದಲ್ಲಿ ಶಾಂತಿಕಾಪಾಡಬೇಕೆಂದು ಸೂಚಿಸಿದರಲ್ಲದೆ, ಯಾವುದೇ ರೀತಿಯ ತೊಂದರೆಗಳಾದರೂ ಜಿಲ್ಲಾಡಳಿತದ ಗಮನಕ್ಕೆ ತಂದರೆ ಅವುಗಳಿಗೆ ಪರಿಹಾರ ಕಲ್ಪಿಸಲಾಗುವುದೆಂದು ಹೇಳಿದರು.
ಮುಷ್ಕರದಿಂದಾಗಿ ಆಹಾರಧಾನ್ಯ, ಡೀಸಲ್, ಪೆಟ್ರೋಲ್, ಗ್ಯಾಸ್, ಔಷಧಿ ಇತ್ಯಾದಿ ದಾಸ್ತಾನು ಗಳ ಕೊರತೆಯಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಸೂಚಿಸಿದರು. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಬೇಗನೆ ಮುಷ್ಕರವನ್ನು ಕೊನೆಗಾಣಿಸಬೇಕೆಂದು ಲಾರಿ ಮಾಲೀಕರು ಸಲಹೆ ನೀಡಿದರು.
ಹೆಲ್ಪ್ಲೈನ್ : ಮುಷ್ಕರ ಸಂದರ್ಭದಲ್ಲಿ ಆಗಬಹುದಾದ ಸಾರಿಗೆ ಸಮಸ್ಯೆಯನ್ನು ನಿವಾರಿಸಲು ಆರ್.ಟಿ.ಓ. ಕಛೇರಿಯಲ್ಲಿ ದಿನದ 24 ಗಂಟೆಯು ಹೆಲ್ಪ್ಲೈನ್ ಕಾರ್ಯನಿರ್ವಹಿಸಲಿದೆ. ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾದರೆ ಸಾರ್ವಜನಿಕರು 222209 ದೂರವಾಣಿಗೆ ಮಾಹಿತಿ ನೀಡಿದರೆ ಕೂಡಲೆ ಇತ್ಯರ್ಥ ಪಡಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ. ಮಲ್ಲಿಕಾರ್ಜುನ್ ತಿಳಿಸಿದರು.
ಚಾಮರಾಜನಗರ : ಲಾರಿ ಮಾಲೀಕರು ರಾಷ್ಟ್ರವ್ಯಾಪ್ತಿ ಭಾನುವಾರದ ಮಧ್ಯರಾತ್ರಿಯಿಂದ ಅನಿರ್ಧಿಷ್ಟ ಕಾಲ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಜಿಲ್ಲೆಯಲ್ಲಿ ನಾಗರೀಕರಿಗೆ ಅಗತ್ಯ ವಸ್ತುಗಳ ಅಭಾವವಾಗದಂತೆ ಪೂರೈಕೆಯಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ತರಕಾರಿಗಳು, ಹಾಲು, ಔಷಧಿ, ಇಂಧನ, ಅಡುಗೆ ಅನಿಲ ಹಾಗೂ ದಿನಸಿಗಳ ಸಾಗಾಣಿಕೆಯಲ್ಲಿ ಲಾರಿ ಮಾಲೀಕರು ಸಹಕರಿಸಬೇಕೆಂದು ತಿಳಿಸಿದರಲ್ಲದೆ ಕೃತಕ ಅಭಾವ ಸೃಷ್ಟಿಸಿ ನಿಗದಿತ ಬೆಲೆಗಿಂತ ಅಧಿಕ ಬೆಲೆಯನ್ನು ನಾಗರೀಕರಿಂದ ಪಡೆದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ನಿಲ್ಲದ ಲಾರಿ ಮುಷ್ಕರ; ಬೆಲೆಗಳು ಗಗನಕ್ಕೆ











Click it and Unblock the Notifications